ಹುಬ್ಬಳ್ಳಿ: ಆನಂದ ನಗರದ ಬಸ್ ತಂಗುದಾಣದಲ್ಲಿ ನಿಂತಿದ್ದ ರಾತ್ರಿ ವಸತಿಯ ನಗರ ಸಾರಿಗೆ ಬಸ್ನ ಹಿಂಭಾಗದ ಗಾಜಿಗೆ ಮೂವರು ಕಿಡಿಗೇಡಿಗಳು ಇಟ್ಟಿಗೆ ತೂರಿ ಹಾನಿ ಮಾಡಿದ ಪ್ರಕರಣ ಮಂಗಳವಾರ ತಡರಾತ್ರಿ ನಡೆದಿದೆ.
ಚಾಲಕ ದಿಲಾವರ್ಸಾಬ್ ಅವರು, ಘೋಡಕೆ ಪ್ಲಾಟ್ನ ಸಿದ್ದಪ್ಪ, ಪ್ರದೀಪ್ ಮತ್ತು ಅವನ ಮತ್ತೊಬ್ಬ ಸ್ನೇಹಿತನ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾತ್ರಿ 2.30ರ ವೇಳೆ ಮೂವರು ನಿಂತಿದ್ದ ಬಸ್ಗೆ ಇಟ್ಟಿಗೆ ಒಗೆದಿದ್ದಾರೆ. ಅದನ್ನು ಪ್ರಶ್ನಿಸಿದ ಚಾಲಕ ಮತ್ತು ನಿರ್ವಾಹಕರಿಗೆ ಅವಾಚ್ಯವಾಗಿ ಬೈದು, ಪೊಲೀಸರಿಗೆ ತಿಳಿಸಿದರೆ ಜೀವ ತೆಗೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಕಲಿ ಖಾತೆ; ಅಶ್ಲೀಲ ಸಂದೇಶ: ಇಲ್ಲಿನ ಸಾಯಿನಗರದ ಯುವತಿಯೊಬ್ಬರ ಹೆಸರಲ್ಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು, ಅಶ್ಲೀಲ ಸಂದೇಶ ಕಳುಹಿಸಿ ಮಾನ ಹಾನಿ ಮಾಡಿರುವ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಖಾತೆ ತೆರೆದ ಆರೋಪಿ, ಅದರ ಪ್ರೊಫೈಲ್ಗೆ ಯುವತಿಯ ಫೋಟೊ ಹಾಕಿದ್ದಾನೆ. ನಂತರ ಅವಳ ಸ್ನೇಹಿತರಿಗೆ ರಿಕ್ವೆಸ್ಟ್ ಕಳುಹಿಸಿ ಅಶ್ಲೀಲ ಪದಗಳಿಂದ ಚಾಟ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
₹60 ಸಾವಿರ ವಂಚನೆ: ಆನ್ಲೈನ್ ಬ್ಯಾಂಕಿಂಗ್ ಆ್ಯಪ್ನಿಂದ ಪಡೆದ ಸಾಲ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಲು ಗೂಗಲ್ನಲ್ಲಿ ದೊರೆತ ಗ್ರಾಹಕರ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದ ಧಾರವಾಡದ ಬಸವರಾಜ ಬೆಂಡಿಗೇರಿ, ₹60 ಸಾವಿರ ವಂಚನೆಗೊಳಗಾಗಿದ್ದಾರೆ.
ಆ್ಯಪ್ನ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಸಾಲ ರದ್ದು ಪಡಿಸುವುದಾಗಿ ಹೇಳಿ ಎನಿ ಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಲು ತಿಳಿಸಿದ್ದಾನೆ. ನಂತರ ಬಸವರಾಜ ಅವರ ಮೊಬೈಲ್ಗೆ ಬಂದ ಪಾಸ್ವರ್ಡ್ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಬಂಧನ: ನವನಗರದ ಕೆಎಚ್ಬಿಯ ನ್ಯಾಯಾಧೀಶರ ಕಾಲೊನಿಯಲ್ಲಿನ ನ್ಯಾಯಾಧೀಶರ ಮನೆ ಬಾಗಿಲು ಮುರಿದು ಕಳವು ಮಾಡಿದ ಆರೋಪಿಯನ್ನು ನವನಗರ ಠಾಣೆ ಪೊಲೀಸರು ಬಂಧಿಸಿ, 37 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಗೋಪನಕೊಪ್ಪದ ನಿವಾಸಿ ಬಂಧಿತರ ಆರೋಪಿ. ಇನ್ಸ್ಪೆಕ್ಟರ್ ಬಿ.ಎಸ್. ಮಂಟೂರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.