ಹುಬ್ಬಳ್ಳಿ: ಪದವಿ ಕಾಲೇಜಿನ ಅಂತಿಮ ವರ್ಷದ ತರಗತಿಗಳನ್ನು ಆರಂಭಿಸಿ 10 ದಿನಗಳೇ ಕಳೆದಿವೆ. ಆದರೂ, ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿನತ್ತ ಸುಳಿಯುತ್ತಿಲ್ಲ. ಹೀಗಾಗಿ, ಕಾಲೇಜು ಆವರಣಗಳು ಇನ್ನೂ ರಂಗು ಪಡೆದುಕೊಂಡಿಲ್ಲ.
ಕಾಲೇಜಿಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು ಕೋವಿಡ್–19 ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗಟಿವ್ ವರದಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಬಂದು ತರಗತಿಗಳಿಗೆ ಹಾಜರಾಗಬೇಕು. ಆಸಕ್ತಿ ಇರುವವರು ಪೋಷಕರ ಪತ್ರದೊಂದಿಗೆ ಬಂದು ತರಗತಿಗಳಿಗೆ ಹಾಜರಾಗಬಹುದು. ಆನ್ಲೈನ್ ತರಗತಿಗಳೂ ನಡೆಯಲಿದ್ದು, ಅಲ್ಲಿಯೇ ಹಾಜರಾಗಬಹುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದರು.
ಕೋವಿಡ್–19 ಪರೀಕ್ಷೆಗೆ ಹಿಂದೇಟು ಹಾಕಿ ಕೆಲವು ವಿದ್ಯಾರ್ಥಿಗಳು ಕಾಲೇಜಿನತ್ತ ಸುಳಿಯಲೇ ಇಲ್ಲ. ಇನ್ನು ಕೆಲವು ವಿದ್ಯಾರ್ಥಿಗಳು ಪೋಷಕರು ಕಾಲೇಜಿಗೆ ಕಳುಹಿಸಲು ಒಪ್ಪಿಲ್ಲ. ಬಹುತೇಕ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕೊರತೆ ಕಾಡುತ್ತಿದೆ.
ಬಾರದ ವರದಿ, ತಪಾಸಣೆಯೂ ಸ್ಥಗಿತ: ಕಾಲೇಜು ಆರಂಭದ ದಿನವಾದ ನ.17 ರಂದು ಕಾಲೇಜುಗಳಲ್ಲಿಯೇ ಕೋವಿಡ್–19 ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು. ಉಪನ್ಯಾಸಕರು, ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಮಾಡಿಸಿಕೊಂಡಿದ್ದರು. ಆದರೆ, 10 ದಿನಗಳು ಕಳೆದರೂ ವರದಿ ಬಂದಿಲ್ಲ.
ಕೋವಿಡ್ ಪರೀಕ್ಷಾ ವರದಿ ನೆಗಟಿವ್ ಬಂದರೆ ನಿಮ್ಮ ಮೊಬೈಲ್ಗೆ ಸಂದೇಶ ಬರುವುದಿಲ್ಲ. ಪಾಸಿಟಿವ್ ಬಂದರಷ್ಟೇ ಬರುತ್ತದೆ. ಬಂದಿಲ್ಲ ಎಂದರೆ ನೆಗಟಿವ್ ಇದ್ದಂತೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸಾಗಹಾಕುತ್ತಿದ್ದಾರೆ. ಆದರೆ, ಎಷ್ಟು ದಿನದೊಳಗೆ ಎಂಬುದನ್ನು ತಿಳಿಸುತ್ತಿಲ್ಲ. ಜತೆಗೆ ಇಲಾಖೆಯ ಅಧಿಕಾರಿಗಳು ನೆಗಟಿವ್ ವರದಿ ತರಬೇಕು ಎಂದಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೋವಿಡ್–19 ಪರೀಕ್ಷೆ ಮಾಡಿಸಿಕೊಳ್ಳಬೇಕಾದ ವಿದ್ಯಾರ್ಥಿಗಳಿದ್ದಾರೆ. ಆದರೆ, ಕಾಲೇಜುಗಳಿಗೆ ಹೋಗಿ ತಪಾಸಣೆ ಮಾಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಕೋವಿಡ್–19 ಆಸ್ಪತ್ರೆಗೆ ಹೋಗಬೇಕಿದೆ. ಅಲ್ಲಿಗೆ ಹೋಗಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಕಾಲೇಜುಗಳ
‘ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ತರಗತಿಗಳಿಗೆ ಯಾವುದೇ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ. ಮೊದಲ ನಾಲ್ಕಾರು ದಿನ ಕೆಲ ವಿದ್ಯಾರ್ಥಿಗಳು ಬಂದಿದ್ದರು. ಈಗ ಯಾರೂ ಬರುತ್ತಿಲ್ಲ. ಆನ್ಲೈನ್ ಮೂಲಕ ಪಾಠ ಮಾಡಲಾಗುತ್ತಿದೆ. ಅದಕ್ಕೆ ಹಾಜರಾಗುತ್ತಿದ್ದಾರೆ. ಎಂಎಸ್ಸಿ ಗೆ 100 ವಿದ್ಯಾರ್ಥಿಗಳ ಪೈಕಿ 32 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಅವರಿಗೆ ವಿದ್ಯಾರ್ಥಿಗಳ ನಡುವೆಅಂತರ ಕಾಪಾಡಿಕೊಂಡು ಪಾಠ ಮಾಡಲಾಗುತ್ತಿದೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಡಾ.ಎಲ್.ಡಿ. ಹೊರಕೇರಿ.
‘ಎಸ್ಜೆಎಂವಿಎಸ್ ಕಾಲೇಜಿನಲ್ಲಿ ಶೇ 70 ರಷ್ಟು ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗುತ್ತಿದ್ದಾರೆ. ಉಳಿದವರು ಆನ್ಲೈನ್ ಪಾಠ ಕೇಳುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿನಿಯರು ಹಾಜರಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಂಗರಾಜ ಪಾಟೀಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.