ಧಾರವಾಡ: ವಿದ್ಯಾರ್ಥಿಗಳು ಕಥೆ, ಕವನ, ಕಾದಂಬರಿಗಳನ್ನು ಓದಬೇಕು. ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ಮಾತನಾಡಿದರು.
ಸಾಹಿತ್ಯ ಓದುವುದರಿಂದ ಭಾಷಾ ಜ್ಞಾನ ವೃದ್ಧಿಸುತ್ತದೆ. ವಿಷಯಗಳು ತಿಳಿಯುತ್ತವೆ. ಪ್ರಚಲಿತ ವಿದ್ಯಾಮಾನಗಳನ್ನು ತಿಳಿದುಕೊಳ್ಳಬೇಕು. ಅಂಕ ಗಳಿಕೆಗೆ ಸೀಮಿತವಾಗದೆ ಎಲ್ಲ ವಿಷಯಗಳ ಬಗ್ಗೆ ಜ್ಞಾನ ಸಂಪಾದಿಸಬೇಕು ಎಂದರು.
ಉಪಪ್ರಾಚಾರ್ಯ ಪ್ರೊ. ಸೂರಜ್ ಜೈನ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಲೆ, ಕ್ರೀಡೆ, ಸಂಗೀತ ಸಹಿತ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸಬೇಕು ಎಂದು ಹೇಳಿದರು.
ವಿವೇಕ ಲಕ್ಷ್ಮೇಶ್ವರ, ಕೆ.ಎಚ್.ನಾಗಚಂದ್ರ, ಆರ್.ವಿ.ಚಿಟಗುಪ್ಪಿ, ಎನ್.ಜಿ.ಪುಡಕಲಕಟ್ಟಿ, ಶ್ರೀಕಾಂತ ರಾಗಿಕಲ್ಲಾಪುರ, ಶ್ರವಣಕುಮಾರ ಯೋಗಿ, ಜಿನ್ನಪ್ಪ ಕುಂದಗೋಳ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಲ್ಲವಿ ಸುಂಕದ, ಮಧು ದಳವಾಯಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.