ADVERTISEMENT

ಅನ್ಯೂರಿಸಮ್‌ ಸಮಸ್ಯೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಸುಚಿರಾಯು ಆಸ್ಪತ್ರೆಯ ತಜ್ಞ ವೈದ್ಯರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 13:39 IST
Last Updated 9 ಏಪ್ರಿಲ್ 2021, 13:39 IST

ಹುಬ್ಬಳ್ಳಿ: ವಿಪರೀತವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರಿಗೆ ಅಯೋರ್ಟಿಕ್‌ ಅನ್ಯೂರಿಸಮ್‌ (ಮಹಪಧಮನಿಯ ಹಿಗ್ಗುವಿಕೆ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಆ ವ್ಯಕ್ತಿ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ನಗರದ ಸುಚಿರಾಯು ಆಸ್ಪತ್ರೆಯ ಶಸ್ತ್ರಚಿಕಿತ್ಸೆ ತಜ್ಞರು ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಸ್ತ್ರಚಿಕಿತ್ಸಕ ಶರಣ ಹಳ್ಳದ ‘ಶಿಕ್ಷಕರಾಗಿದ್ದ ಭಾವಸಾಹೇಬ್‌ ಎಂಬುವರಿಗೆ ಮಹಪಧಮನಿಯ ಹಿಗ್ಗುವಿಕೆ ಹೆಚ್ಚಾಗಿ ರಕ್ತಸ್ರಾವವಾಗಿತ್ತು. ಇದರಿಂದಾಗಿ ಅವರ ರಕ್ತ ಹಾಗೂ ರಕ್ತದೊತ್ತಡ ಎರಡೂ ಕಡಿಮೆಯಾಗಿ ಆರೋಗ್ಯ ಪರಿಸ್ಥಿತಿ ಗಂಭೀರಗೊಂಡಿತ್ತು. ಮೂತ್ರಪಿಂಡಗಳು ಸಹ ದುರ್ಬಲಗೊಂಡಿದ್ದವು. ಅನ್ಯೂರಿಸಮ್‌ ಆರು ಸೆಂಟಿಮೀಟರ್‌ನಲ್ಲಿ ಗಾತ್ರ ಹೊಂದಿದ್ದು, ಬೇರೆ ಬೇರೆ ವಿಭಾಗಗಳ ವೈದ್ಯರ ಶಸ್ತ್ರಚಿಕಿತ್ಸೆಗಳ ಮೂಲಕ ಆರೋಗ್ಯ ಸರಿಪಡಿಸಲಾಯಿತು’ ಎಂದರು.

‘ರೋಗಿಗೆ ಎಂಟು ತಾಸು ಶಸ್ತ್ರಚಿಕಿತ್ಸೆ ಮಾಡಿದ ಬಳಿ ಒಂದು ವಾರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಒಟ್ಟು 24 ದಿನ ಆಸ್ಪತ್ರೆಯಲ್ಲಿದ್ದರು’ ಎಂದರು.

ADVERTISEMENT

‘ಅನ್ಯೂರಿಸಮ್‌ ಲಕ್ಷಣಗಳು ಹೇಗಿರುತ್ತವೆ ಎನ್ನುವುದು ಆರಂಭದಲ್ಲಿ ಗೊತ್ತಾಗುವುದಿಲ್ಲ. ಭಾವಸಾಹೇಬ್‌ ಅಂತಿಮ ಹಂತದಲ್ಲಿದ್ದಾಗ ನಮ್ಮ ಆಸ್ಪತ್ರೆಗ ಬಂದಿದ್ದರು. ತಜ್ಞ ವೈದ್ಯರು ತುರ್ತಾಗಿ ಸ್ಪಂದಿಸಿದ್ದರಿಂದ ಅವರ ಜೀವ ಉಳಿಯಿತು. ರೋಗಿಯ ಎಡಭಾಗದ ಮೂತ್ರಪಿಂಡದ ರಕ್ತನಾಳ ತೀವ್ರ ಒತ್ತಡದಲ್ಲಿತ್ತು. ರಕ್ತದ ಒತ್ತಡ ಏರುಪೇರು ಆಗದಂತೆ ಅರಿವಳಿಕೆ ತಜ್ಞ ರಮೇಶ ಠಿಕಾರಿ ಶಸ್ತ್ರಚಿಕಿತ್ಸೆ ಮೂಲಕ ತಡೆದರು’ ಎಂದು ತಿಳಿಸಿದರು. ಶರಣ ಹಳ್ಳದ, ಷಣ್ಮುಖ ಹಿರೇಮಠ, ಶ್ರೀಶೈಲ್‌ ಚಿನಿವಾಲರ ಮತ್ತು ಮೂತ್ರಪಿಂಡ ತಜ್ಞ ಚೇತನ ಮುದ್ರಬೆಟ್ಟು ಅವರನ್ನು ಒಳಗೊಂಡ ವೈದ್ಯರ ತಂಡ ಶಸ್ತಚಿಕಿತ್ಸೆ ನೆರವೇರಿಸಿದೆ.

ಚೇತನ ಮುದ್ರಬೆಟ್ಟು ಮಾತನಾಡಿ ‘ರೋಗಿಯ ಮೂತ್ರಪಿಂಡಗಳು ದುರ್ಬಲವಾಗಿದ್ದರಿಂದ ಅವರನ್ನು ಕೆಲವು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಸೂಕ್ಷ್ಮ ಸ್ಥಿತಿಯಲ್ಲಿದ್ದ ಕಾರಣ ಸಾಮಾನ್ಯ ಬದಲು ಸಿಆರ್‌ಆರ್‌ಟಿ ಎಂಬ ವಿಶೇಷ ಡಯಾಲಿಸಸ್‌ ಚಿಕಿತ್ಸೆ ನೀಡಲಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.