ADVERTISEMENT

ಕಳಸಾ ಬಂಡೂರಿ ಹೋರಾಟಗಾರರಿಗೆ ಮತ್ತೆ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 22:25 IST
Last Updated 5 ಡಿಸೆಂಬರ್ 2021, 22:25 IST

ನವಲಗುಂದ (ಧಾರವಾಡ ಜಿಲ್ಲೆ): ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಈಗ ಹೋರಾಟಗಾರರಿಗೆ ಇಲ್ಲಿಯ ಹಿರಿಯ ದಿವಾಣಿ ನ್ಯಾಯಾಲಯದಿಂದ ಮತ್ತೆ ಸಮನ್ಸ್‌ ಜಾರಿಯಾಗಿದೆ.

ಕಳಸಾ–ಬಂಡೂರಿ ನಾಲೆ ಜೋಡಣೆಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ತಾಲ್ಲೂಕಿನ ಪಡೆಸೂರ ಗ್ರಾಮದ ರಮೇಶ ವೆಂಕರಡ್ಡಿ ನವಲಗುಂದ ಅವರಿಗೆ ಡಿ.7ರಂದು ತಪ್ಪದೇ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದು, ರೈತ ರಮೇಶ ಆತಂಕ ವ್ಯಕ್ತಪಡಿಸಿದ್ದಾರೆ.

‘ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ, ಸಮನ್ಸ್ ಬಂದಿರುವುದು ಆಶ್ಚರ್ಯ ಮೂಡಿಸಿದೆ. ಈ ಬಗ್ಗೆ ವಕೀಲರೊಂದಿಗೆ ಚರ್ಚಿಸಿದಾಗ ಪ್ರಕರಣ ಮುಕ್ತಾಯವಾಗಿದೆ ಎಂದು ಕಂಪ್ಯೂಟರ್‌ನಲ್ಲಿ ತೋರಿಸುತ್ತಿದೆ. ಆದರೆ, ಪೊಲೀಸರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಲೇಬೇಕು ಎಂದು ಹೇಳುತ್ತಿದ್ದಾರೆ’ ಎಂದಿದ್ದಾರೆ.

ADVERTISEMENT

‘ನಮ್ಮೂರಿನಲ್ಲಿ ಒಟ್ಟು ಇಬ್ಬರಿಗೆ ಸಮನ್ಸ್ ಬಂದಿದೆ. ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ. ಬೇಕಾದರೆ ಬಂಧಿಸಿ, ಜೈಲಿಗೆ ಹಾಕಲಿ. ನಾವು ಎಲ್ಲದ್ದಕ್ಕೂ ಸಿದ್ಧ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.