ಹುಬ್ಬಳ್ಳಿ: ‘ಶ್ರದ್ಧೆ ಇದ್ದಾಗ ದೇವರು ಒಲಿಯುತ್ತಾನೆ. ನಂಬಿದ ಭಕ್ತರನ್ನುಸಿದ್ಧಾರೂಢರು ಎಂದಿಗೂ ಕೈ ಬಿಡುವುದಿಲ್ಲ’ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯಜ್ಜ ಹೇಳಿದರು.
ಕಲಘಟಗಿ ತಾಲ್ಲೂಕಿನ ದುಮ್ಮವಾಡ ಗ್ರಾಮದ ಸಿದ್ಧಾರೂಢ ಮಠದಲ್ಲಿ ಆಯೋಜಿಸಿದ್ದ ಭಕ್ತ ಮಡಿವಾಳಪ್ಪ ರಾಮಪ್ಪ ಚಂಡುನವರ ಪ್ರಥಮ ಪುಣ್ಯಸ್ಮರಣೆ ಹಾಗೂ ಮಡಿವಾಳಪ್ಪ ಚಂಡುನವರ ಆರೂಢ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆರೂಢ ಎಂದರೆ ಅರಿಷಡ್ವರ್ಗಗಳನ್ನು ಜಯಿಸಿದವರು. ಸಿದ್ಧಾರೂಢರು ಅವುಗಳನ್ನು ಜಯಿಸಿದ್ದರು. ಅವರ ಹಾದಿಯಲ್ಲೆ ಸಾಗಿದ ಮಡಿವಾಳಪ್ಪ ಅವರು, ಸತ್ಯ ಹಾಗೂ ಪ್ರಾಮಾಣಿಕ ಜೀವನ ನಡೆಸಿ ಆರೂಢ ಪರಂಪರೆಯಲ್ಲಿ ಸಾಧನೆ ಮಾಡಿದರು’ ಎಂದರು.
ಖ್ಯಾತ ಗಾಯಕ ಪಂಡಿತ ಎಂ. ವೆಂಕಟೇಶಕುಮಾರ ಮಾತನಾಡಿ, ‘ಗುರು–ಶಿಷ್ಯ ಪರಂಪರೆ ಬಹಳ ಮುಖ್ಯವಾದುದು. ಆರೂಢ ಪರಂಪರೆಯಲ್ಲಿ ಆತ್ಮಜ್ಞಾನ ಪಡೆದು ಜೀವನ ಸಾರ್ಥಕತೆ ಮಾಡಿಕೊಳ್ಳಬೇಕು. ಮುಂದಿನ ವರ್ಷ ಈ ವೇದಿಕೆಯಲ್ಲಿ ಸಂಗೀತ ಕಚೇರಿ ನಡೆಸಿಕೊಡುವೆ’ ಎಂದು ಭರವಸೆ ನೀಡಿದರು.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ‘ದ್ವೇಷ ಸಾಧಿಸುವುದು ಧರ್ಮವಲ್ಲ. ಮನುಷ್ಯನಾದವನು ವಿದ್ಯಾದಾನ ಮತ್ತು ಅನ್ನದಾನದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜೆ.ಎಂ ಚಂಡುನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಸೋಮು ಕುಂದರಗಿ ನಿರೂಪಿಸಿದರು.ಕಲಾವಿದ ಡಾ. ಅಯ್ಯಪ್ಪ ಹಡಗಲಿಮಠ ಮತ್ತು ಸಂಗಡಿಗರಿಂದ ಪ್ರಾರ್ಥನೆ ನಡೆಯಿತು.
ಕಣವಿ ಹೊನ್ನಾಪುರದ ವೀರೇಶ್ವರ ಸ್ವಾಮೀಜಿ, ನಿವೃತ್ತ ಅಧಿಕಾರಿ ಶಿವನಗೌಡ ಪಾಟೀಲ, ಡಾ. ಪಿ.ಜಿ.ಎ.ಎಸ್. ಸಮಿತಿ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಲಿಂಗರಾಜ ಅಂಗಡಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಸ್.ಎನ್. ರಾಯನಾಳ, ಎನ್.ಆರ್. ಚಂಡು, ಟ್ರಸ್ಟ್ ಅಧ್ಯಕ್ಷ ಸಿದ್ದು ಹೊನ್ನಿಹಳ್ಳಿ, ಕಾರ್ಯದರ್ಶಿ ನೀಲವ್ವ ಚಂಡು, ಬಾಳವ್ವ ಹೆಂಬಲಿ, ಫಕ್ಕೀರಪ್ಪ ರೊಟ್ಟಿ, ಮಂಜು ಪುಜಾರ, ಪಾರ್ವತಿ ಚಂಡುನವರ, ಪ್ರಭಾಕರ ನಾಯಕ, ಬಿ.ವೈ. ಪಾಟೀಲ, ಫಕ್ಕೀರಪ್ಪ ನರೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.