ಹುಬ್ಬಳ್ಳಿ: ಬೆಳಗಾವಿ ತನಕ ವಿಸ್ತರಿಸಿರುವ ಅಶೋಕಪುರಂ–ಹುಬ್ಬಳ್ಳಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿಗೆ ಶುಕ್ರವಾರ (ನ. 1) ಸಂಜೆ 4.30ಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕುಂದಾನಗರಿಯಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ.
ನ. 1ರಂದು ಅಶೋಕಪುರಂನಿಂದ ಬೆಳಿಗ್ಗೆ 5.15ಕ್ಕೆ ಹೊರಡುವ ರೈಲು ಸಂಜೆ 6.53ಕ್ಕೆ ಹುಬ್ಬಳ್ಳಿಗೆ ಬರಲಿದೆ. ಇಲ್ಲಿಂದ ರಾತ್ರಿ 7.05ಕ್ಕೆ ಹೊರಟು ರಾ. 10.30ಕ್ಕೆ ಬೆಳಗಾವಿ ಮುಟ್ಟಲಿದೆ. ಮರುದಿನ ಬೆಳಿಗ್ಗೆ 5 ಗಂಟೆಗೆ ಬೆಳಗಾವಿಯಿಂದ ಹೊರಟು 8.30ಕ್ಕೆ ಹುಬ್ಬಳ್ಳಿಗೆ ಬರಲಿದೆ. 8.45ಕ್ಕೆ ಇಲ್ಲಿಂದ ಹೊರಡುವ ರೈಲು ರಾತ್ರಿ 9.15ಕ್ಕೆ ಅಶೋಕಪುರಂಗೆ ತಲುಪಲಿದೆ ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ. ಈ ರೈಲು ಕರ್ನಾಟಕದ 15 ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿದೆ.
ತಾತ್ಕಾಲಿಕ ನಿಲುಗಡೆ: ಪಂಢರಾಪುರದಲ್ಲಿ ಜಾತ್ರೆ ಇರುವ ಕಾರಣ ಅ. 31, ನ.7 ಮತ್ತು ನ. 14ರಂದು ಯಶವಂತಪುರ–ಪಂಢರಾಪುರ ವಾರದ ರೈಲು ಘಟಪ್ರಭಾದಲ್ಲಿ ಒಂದು ನಿಮಿಷ ನಿಲುಗಡೆಯಾಗಲಿದೆ. ಈ ನಿಲ್ದಾಣಕ್ಕೆ ಬೆಳಿಗ್ಗೆ 6.29ಕ್ಕೆ ರೈಲು ಬರಲಿದೆ.
ನ. 1, 8 ಮತ್ತು 15ರಂದು ಇದೇ ರೈಲು ಪಂಢರಾಪುರದಿಂದ ಹೊರಡುವಾಗ ಘಟಪ್ರಭಾದಲ್ಲಿ (ಸಂಜೆ 5.44) ಒಂದು ನಿಮಿಷ ನಿಲ್ಲಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.