ಗುಡಗೇರಿ: ಸಾಮಾಜಿಕ ಅರಣ್ಯ ಇಲಾಖೆಯು ರಸ್ತೆಯ ಬದಿಯಲ್ಲಿ ನೆಟ್ಟು, ಪೋಷಿಸುತ್ತಿದ್ದ ಸಸಿಗಳುರೈತರು ರಸ್ತೆಯ ಬದಿಯಲ್ಲಿ ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಬೆಂಕಿಗೆ ಆಹುತಿಯಾಗುತ್ತಿವೆ.
ಕುಂದಗೋಳ ತಾಲ್ಲೂಕಿನಲ್ಲಿ 2020-21ನೇ ಸಾಲಿನಲ್ಲಿ 16 ಕಿ.ಮೀ. ರಸ್ತೆಯ ಬದಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಸಿಗಳನ್ನು ನೆಟ್ಟಿದ್ದಾರೆ. ಅದರಂತೆ ಪ್ರತಿವರ್ಷವು ರಸ್ತೆಯ ಬದಿಯಲ್ಲಿ 16 ಕಿ.ಮೀ.ದಿಂದ 20 ಕಿ.ಮೀ.ವರೆಗೆ ಅರಣ್ಯ ಬೆಳೆಸಲು ಅಧಿಕಾರಿಗಳು ಪ್ರತಿ ವರ್ಷ ಶ್ರಮ ಪಡುತ್ತಿದ್ದಾರೆ. ಆದರೆ ರೈತರು ರಸ್ತೆಯ ಬದಿಯಲ್ಲಿ ಕಸ ಕಟಾವು ಮಾಡಿ ಬೆಂಕಿ ಹಚ್ಚುತ್ತಿರುವುದರಿಂದ ಕಸದೊಂದಿಗೆ ಈ ಸಸಿಗಳು ಸಹ ಬೆಂಕಿಗೆ ಆಹುತಿಯಾಗುತ್ತಿವೆ. ಇದರಿಂದ ಅಧಿಕಾರಿಗಳು ಪಟ್ಟ ಶ್ರಮ ವ್ಯರ್ಥವಾಗುತ್ತಿದೆ.
ಅರಣ್ಯ ಸಂಪತ್ತು ಇದ್ದರೆ ಮಾತ್ರ ಮನುಷ್ಯ ಕುಲ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ವರ್ಷವು ಅರಣ್ಯ ಇಲಾಖೆಯ ಮೂಲಕ ಸಸಿಗಳನ್ನು ಬೆಳೆಸಲು ಜಾಗೃತಿ ಮೂಡಿಸುತ್ತದೆ. ರೈತರು ಸಹ ಇದರ ಜೊತೆಗೆ ಕೈ ಜೋಡಿಸಿ ಅರಣ್ಯ ಬೆಳೆಸಲು ಸಹಕಾರ ನೀಡಿದಾಗ ಅರಣ್ಯ ಬೆಳೆಸಲು ಸಾಧ್ಯವಾಗುತ್ತದೆ. ರೈತರು ರಸ್ತೆಯ ಬದಿಗೆ ಬೆಂಕಿ ಹಚ್ಚುವ ಬದಲು ಕಸ ಕಿತ್ತು ಒಂದಡೆ ಶೇಖರಿಸಿ ಸುಡಬೇಕು. ಇದರಿಂದ ಅರಣ್ಯ ಇಲಾಖೆಯವರು ಬೆಳೆಸುವ ಸಸಿಗಳಿಗೆ ರಕ್ಷಣೆ ಸಿಕ್ಕಂತಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಈ ಕುರಿತು ತಾಲ್ಲೂಕು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಆರ್.ಡಿ. ನದಾಫ ಪ್ರತಿಕ್ರಿಯಿಸಿ, 'ಪ್ರಸಕ್ತ ವರ್ಷದಲ್ಲಿ ಕುಂದಗೋಳ - ಮುಳ್ಳೂಳ್ಳಿ ಮಾರ್ಗದ 6 ಕಿ.ಮೀ, ಚಾಕಲಬ್ಬಿ - ಹೊಸಳ್ಳಿ ಮಾರ್ಗದ 4 ಕಿ.ಮೀ, ಸಂಶಿ- ಅತ್ತಿಗೇರಿ ಮಾರ್ಗದ 4 ಕಿ.ಮೀ, ಸಂಕ್ಲೀಪೂರ - ಯಲವಗಿ ಕ್ರಾಸ್ವರಿಗೆ 2 ಕಿ.ಮೀ ರಸ್ತೆಯ ಬದಿ ಸಸಿಗಳನ್ನು ನೆಡಲಾಗಿದೆ. ಸಸಿಗಳ ರಕ್ಷಣೆ ಕುರಿತು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ರಸ್ತೆಯ ಬದಿ ಕಸಗೂಡಿಸಿ ಬೆಂಕಿ ಹಾಕಬಾರದು’ ಎಂದು ವಿನಂತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.