ಹುಬ್ಬಳ್ಳಿ: ನಗರದ ರಾಯನಾಳದ ಮೇಟಿ ಓಣಿಯಲ್ಲಿ 2015ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ 5ನೇ ಸೆಷನ್ಸ್ ಕೋರ್ಟ್ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ₹3.60 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
ರಾಯನಾಳದ ಪಲ್ಲೇದವರ ಓಣಿಯ ಸಿದ್ದಪ್ಪ ಕೋಳೂರ, ಗದಿಗೆಪ್ಪ ಕೋಳೂರ ಹಾಗೂ ಯಲ್ಲಾಪುರ ಓಣಿಯ ಮಲ್ಲಿಕಾರ್ಜುನ ಚನ್ನೋಜಿ ಶಿಕ್ಷೆಗೆ ಒಳಗಾದ ವ್ಯಕ್ತಿಗಳು.
ರಾಯನಾಳದ ಮೇಟಿ ಓಣಿಯ ಮುತ್ತವ್ವ ಅಂಗಡಿ ಅವರು ಸಂಜಯ ಪಟದಾರಿ ಎಂಬುವವರಿಗೆ ಮನೆ ಬಾಡಿಗೆ ನೀಡಿದ್ದರು. ಮನೆ ಬಾಡಿಗೆ ಪಡೆದಿರುವ ಸಂಬಂಧ ಪಲ್ಲೇದರ ಓಣಿಯ ಸಿದ್ದಪ್ಪ ಕೊಳೂರ ಮತ್ತು ಸಂಜಯ ಪಟದಾರಿ ನಡುವೆ ಜಗಳವಾಗಿತ್ತು.
ಬಾಡಿಗೆ ಮನೆಯಿಂದ ಸಂಜಯನನ್ನು ಖಾಲಿ ಮಾಡಿಸುವಂತೆ ಸಿದ್ದಪ್ಪನು ಮುತ್ತವ್ವ ಅವರಿಗೆ ಒತ್ತಾಯ ಮಾಡುತ್ತಿದ್ದ. ಈ ಕಿರಿಕಿರಿ ತಾಳದ ಸಂಜಯ ಮನೆ ಖಾಲಿ ಮಾಡಿದ್ದ. ನಮ್ಮ ಮಾತಿಗೆ ಬೆಲೆ ಕೊಟ್ಟು ಮನೆ ಖಾಲಿ ಮಾಡಿಸಲಿಲ್ಲ ಎಂದು, ಮುತ್ತವ್ವ ಮತ್ತು ಅವರ ಮಕ್ಕಳಾದ ಕಲ್ಲಪ್ಪ ಮತ್ತು ಬಸವರಾಜ ಮೇಲೆ ದ್ವೇಷ ಸಾಧಿಸುತ್ತ ಬಂದಿದ್ದ.
ಮುತ್ತವ್ವ ಅವರ ಪುತ್ರ ಬಸವರಾಜಗೆ ಸಿದ್ದಪ್ಪ ಹಾಗೂ ಸಹಚರರು ಚಾಕುವಿನಿಂದ ಇರಿದಿದ್ದರು. ಗಂಭೀರ ಗಾಯಗೊಂಡಿದ್ದ ಬಸವರಾಜ ಮೃತಪಟ್ಟಿದ್ದರು. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ್ಯಾಯಾಧೀಶ ಕೆ.ಎನ್. ಗಂಗಾಧರ ಬುಧವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಡಿ.ಎ. ಭಾಂಡೇಕರ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.