ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಎಐಎಂಐಎಂ ಪಕ್ಷದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ತಮ್ಮದೇ ಪಕ್ಷದ ವಿರೋಧದ ನಡುವೆಯೇ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಅವರು, ಜಯಂತಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಅಹಿತಕರ ಘಟನೆ ನಡೆಯದಂತೆ, ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಅವರ ನೇತೃತ್ವದಲ್ಲಿ, ನೂರೈವತ್ತಕ್ಕೂ ಹೆಚ್ಚು ಪೊಲೀಸರನ್ನು ಮೈದಾನದ ಒಳಗೆ ಮತ್ತು ಹೊರಗೆ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
ಕೆಎಸ್ಆರ್ ಪಿ ವಾಹನದೊಂದಿಗೆ ಪೊಲೀಸರು ಬುಧವಾರ ರಾತ್ರಿಯಿಂದಲೇ ಮೈದಾನದಲ್ಲಿ ಬೀಡು ಬಿಟ್ಟಿದ್ದಾರೆ. ಹಳೇ ಕೋರ್ಟ್ ವೃತ್ತ, ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಮೈದಾನದ ಸುತ್ತಲೂ ಪೊಲೀಸರು ಗುಂಪು ಗುಂಪಾಗಿ ನಿಂತಿದ್ದಾರೆ.
ಸರಳ ಆಚರಣೆ: ಸರಳವಾಗಿ ಜಯಂತಿ ಆಚರಿಸಲಾಗುವುದು. ಅದಕ್ಕಾಗಿ, ಪೊಲೀಸ್ ಅನುಮತಿ ಪಡೆದು, ಪಾಲಿಕೆಗೆ ₹10 ಸಾವಿರ ಶುಲ್ಕ ತುಂಬಲಾಗಿದೆ. ಮಧ್ಯಾಹ್ನ 12ಕ್ಕೆ ಸರಿಯಾಗಿ ಟಿಪ್ಪು ಚಿತ್ರಕ್ಕೆ ಪೂಜೆ ಸಲ್ಲಿಸಿ, ಘೋಷಣೆಗಳನ್ನು ಕೂಗಲಾಗುವುದು. ಅಧ್ಯಕ್ಷರನ್ನು ಹೊರತುಪಡಿಸಿ ಪಕ್ಷದ ಬಹುತೇಕ ಪದಾಧಿಕಾರಿಗಳು ಆಚರಣೆಯಲ್ಲಿ ಭಾಗವಹಿಸುತ್ತಾರೆ ಎಂದು ವಿಜಯ ಗುಂಟ್ರಾಳ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.