ADVERTISEMENT

ಟ್ರೇಡಿಂಗ್‌: ವಿದ್ಯಾರ್ಥಿಗೆ ₹20 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 16:14 IST
Last Updated 19 ಮಾರ್ಚ್ 2024, 16:14 IST
ವಂಚನೆ
ವಂಚನೆ   

ಹುಬ್ಬಳ್ಳಿ: ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ಕುಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ವಿದ್ಯಾರ್ಥಿ ಸಂದೀಪ ಜುಟ್ಟಲ್‌ ಅವರನ್ನು ನಂಬಿಸಿದ್ದ ನಾಲ್ವರು, ₹20 ಲಕ್ಷವನ್ನು ನಗದು ಹಾಗೂ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಗುಜರಾತ ಮೂಲದ ಸೋನಿ ರಾಹುಲ್‌, ಭೂಮಿಕಾ, ಐಶ್ವರ್ಯಾ ಮತ್ತು ಜುಬೇದಾ ಬೇಗಂ ವಿರುದ್ಧ, ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಸಂದೀಪ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ನಗರದ ಕೊಪ್ಪಿಕರ ರಸ್ತೆಯ ಸೆಟ್ಲಲೈಟ್‌ ಕಾಂಪ್ಲೆಕ್ಸ್‌ನಲ್ಲಿ ಆರೋಪಿಗಳು ಎನ್‌.ಎಸ್‌. ಅಕೌಂಟ್‌ ಮ್ಯಾನೇಜ್‌ಮೆಂಟ್‌ ಕಚೇರಿ ತೆರೆದಿದ್ದು, ಪ್ರತಿ ತಿಂಗಳು ಹಣ ಹೂಡಿಕೆ ಮಾಡಿದರೆ ಶೇ 15ರಷ್ಟು ಲಾಭ ನೀಡುವುದಾಗಿ ಜಾಹೀರಾತು ನೀಡಿದ್ದರು. ಆ ಕುರಿತು ಸಂದೀಪ, ಕಚೇರಿಗೆ ಹೋಗಿ ವಿಚಾರಿಸಿ, ಹಣ ಹೂಡಿಕೆ ಮಾಡಿದ್ದರು. ಅಲ್ಲದೆ, ಅವರ ತಂದೆಯ ಹೆಸರಲ್ಲಿರುವ ಕಾರನ್ನು ಬೇರೆಯವರ ಹೆಸರಿಗೆ ನೋಂದಾಯಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಅಪಘಾತ; ಒಬ್ಬ ಸಾವು: ತಾಲ್ಲೂಕಿನ ನೂಲ್ವಿ ಗ್ರಾಮದ ಬಳಿ ಆಟೊಗೆ ಕಂಟೇನರ್‌ ಡಿಕ್ಕಿ ಹೊಡೆದ ಪರಿಣಾಮ, ಆಟೊದಲ್ಲಿದ್ದ ಚನ್ನಾಪುರ ಗ್ರಾಮದ ಈರಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುವಿನಹಾಳದಲ್ಲಿ ನಡೆಯಲಿರುವ ಸಂತ ಷರೀಫರ ಜಾತ್ರೆಗೆ ಚನ್ನಾಪುರ ಗ್ರಾಮದಿಂದ ನಾಲ್ವರು ಆಟೊದಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಮಾರಾಟ, ಬಂಧನ: ನಗರದ ಬಿವಿಬಿ ಕಾಲೇಜಿನ ಹಿಂದಿನ ಪ್ರವೇಶದ್ವಾರದ ಬಳಿ (ಲೋಕಪ್ಪನ ಹಕ್ಕಲ) ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ, ₹11,500 ಮೌಲ್ಯದ ಗಾಂಜಾ ಮತ್ತು ₹500 ನಗದು ವಶಪಡಿಸಿಕೊಂಡಿದ್ದಾರೆ.

ಶಾಂತಿ ಕಾಲೊನಿಯ ಜೆ. ಮರಿಯಾದಾಸ ಮತ್ತು ವಿನಯಕುಮಾರ ಎಚ್‌. ಬಂಧಿತರು. ಆರೋಪಿಗಳು ಚಿಕ್ಕಚಿಕ್ಕ ಪ್ಯಾಕೆಟ್‌ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಲಿ ನಡೆಸಿದ್ದಾರೆ. 238 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.