ಹುಬ್ಬಳ್ಳಿ: ‘ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ, ಮೊದಲನೇ ಹಂತದ ನಿವೇಶನಗಳನ್ನು ನ. 1ರೊಳಗೆ ಫಲಾನುಭವಿಗಳಿಗೆ ವಿತರಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಮೇಯರ್ ಈರೇಶ ಅಂಚಟಗೇರಿ ಅಧಿಕಾರಿಗಳಿಗೆ ಎಚ್ಚರಿಕೆ ನಿಡಿದರು.
ಯೋಜನೆ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರ ಸಂಘದವರೊಂದಿಗೆ ನಗರದಲ್ಲಿ ಗುರುವಾರ ಸಭೆ ನಡೆಸಿದ ಅವರು, ‘ಯೋಜನೆಯಡಿ 320 ನಿವೇಶನಗಳನ್ನು ನಿರ್ಮಿಸಲಾಗುತ್ತಿದ್ದು, ಕಾಲಮಿತಿಯಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಬೇಕು’ ಎಂದರು.
ಪೌರ ಕಾರ್ಮಿಕರ ಸಂಘದ ಸಮಸ್ಯೆಗಳನ್ನು ಆಲಿಸಿದ ಮೇಯರ್, ಹಂತಹಂತವಾಗಿ ಪರಿಹರಿಸುವ ಭರವಸೆ ನೀಡಿದರು. ಉಪ ಮೇಯರ್ ಉಮಾ ಮುಕುಂದ, ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ವಿರೋಧ ಪಕ್ಷದ ನಾಯಕ ದೊರೈರಾಜ್ ಮಣಿಕುಂಟ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜಯಾನಂದ ಶೆಟ್ಟಿ, ಸುರೇಶ ಬೆದರೆ ಹಾಗೂ ಅಧೀಕ್ಷಕ ಎಂಜಿನಿಯರ್ ತಿಮ್ಮಪ್ಪ ಇದ್ದರು.
₹10 ಲಕ್ಷ ಅನುದಾನ: ವಾರ್ಡ್ 32ರ ಮಂಜುನಾಥ ನಗರದ ಕುರ್ಡೇಕರ ಪ್ಲಾಟ್ಗೆ ಭೇಟಿ ನೀಡಿದ ಮೇಯರ್, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ರಸ್ತೆ, ಬೀದಿದೀಪ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಜನರು ಮನವಿ ಸಲ್ಲಿಸಿದರು.
‘ಪ್ಲಾಟ್ನಲ್ಲಿ ಯುಜಿಡಿ ಕಾಮಗಾರಿಗಾಗಿ ಮೇಯರ್ ವಿಶೇಷ ಅನುದಾನದಿಂದ ₹10 ಲಕ್ಷ ನೀಡಲಾಗುವುದು’ ಎಂದು ಭರವಸೆ ನೀಡಿದ ಮೇಯರ್, ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಸದಸ್ಯರಾದ ಸತೀಶ ಹಾನಗಲ್ಲ, ಎಂ.ಆರ್. ಪಾಟೀಲ, ಪ್ರಕಾಶ ಜೋಷಿ, ಆರ್.ಇ. ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.