ADVERTISEMENT

ಮರದ ಮ್ಯಾಗ ಅಪರೂಪದ ಅತಿಥಿ ಉಡ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 14:43 IST
Last Updated 9 ಫೆಬ್ರುವರಿ 2020, 14:43 IST
ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಸಮೀಪದ ಹೊರವಲಯದಲ್ಲಿ ಕಾಣಿಸಿಕೊಂಡ ಉಡ
ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಸಮೀಪದ ಹೊರವಲಯದಲ್ಲಿ ಕಾಣಿಸಿಕೊಂಡ ಉಡ   

ನೋಡಿದ ತಕ್ಷಣವೇ ಇದು ಉಡ ಇರಬೇಕು ಎನ್ನುವುದು ಸಹಜ. ಆದರೆ ಇವು ಇಂದಿನ ದಿನಗಳಲ್ಲಿ ಹೆಚ್ಚು ಕಾಣುತ್ತಿಲ್ಲ. ಇಂತಹ ಸರೀಸೃಪಗಳು ಈಗಿನ ದಿನಗಳಲ್ಲಿ ಅಪರೂಪದ ಅತಿಥಿಗಳಾಗಿವೆ. ಹೀಗೇಕೆ ಎಂದುನೂರೆಂಟು ಆಲೋಚನೆ ಮಾಡಿದಾಗ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈ ರೀತಿಯ ಸರೀಸೃಪಗಳ ಬಲಿ ಪಡೆಯುತ್ತಿದ್ದಾನೆ ಎಂಬ ವಿಷಯವೂ ತಿಳಿದು ಬರುತ್ತದೆ. ಇಂತಹ ಅಪರೂಪದ ಉಡ ಕಂಡು ಬಂದಿದ್ದು ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಸಮೀಪದ ಹೊರವಲಯದಲ್ಲಿ.

ಹೊಲ ಗದ್ದೆಗಳಲ್ಲಿ ಕಾಣಿಸಿಕೊಂಡಾಗ ಹಿರಿಯರು ಇವುಗಳ ಕುರಿತು ಕೆಲವು ಮಾತುಗಳನ್ನಾಡುತ್ತಿದ್ದರು. ಉಡಗಳು ಮನುಷ್ಯನ ಕಾಲಿನ ಹಿಮ್ಮಡಿ ಗಟ್ಟಿಯಾಗಿ ಹಿಡಿಯುತ್ತವೆ. ಆಗ ‘ಏಳು ಊರಿನ ಗೌಡರ ಹೆಸರುಗಳನ್ನು ಒಂದೇ ಉಸಿರಿನಲ್ಲಿ ಹೇಳಿದರೆ ಮಾತ್ರ ಬಿಡುತ್ತದೆ’ ಹಾಗೂ ಛತ್ರಪತಿ ಶಿವಾಜಿ ಮಹರಾಜರು ಇವುಗಳನ್ನು ಯುದ್ಧದ ಸಮಯದಲ್ಲಿ ಬಳಸುತ್ತಿದ್ದರು ಎಂಬ ಕಥೆಗಳೂ ಇವೆ.

ಉಡ ನೋಡಲು ತುಂಬಾ ಭಯಾನಕವಾಗಿದ್ದರೂ ಸೂಕ್ಷ್ಮವಾಗಿರುತ್ತದೆ. ಪ್ರಾಣಾಪಾಯದ ಸಂದರ್ಭದಲ್ಲಿ ಮಾತ್ರ ಬಾಲದಿಂದ ಹೊಡೆಯುತ್ತವೆ ಅಥವಾ ಕಚ್ಚುತ್ತದೆ. ಉಡಗಳನ್ನು ಸಾಯಿಸಿ ಅವುಗಳ ಚರ್ಮದಿಂದ ತಮಟೆ ವಾದ್ಯಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ ಇವುಗಳ ರಕ್ತದಿಂದ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಾರೆ. ಕೆಲವು ಸಮುದಾಯದ ಜನ ಆಹಾರಕ್ಕಾಗಿ ಇವುಗಳನ್ನು ಬೇಟಿಯಾಡುವುದುಂಟು ಎಂಬ ಮಾಹಿತಿಯನ್ನು ಅಂದು ಹಿರಿಯರು ಆಡುತ್ತಿದ್ದ ಮಾತುಗಳನ್ನು ಆಲಿಸಿದ್ದು ಸತ್ಯ.

ADVERTISEMENT

ಈ ಜೀವಿಗಳಲ್ಲಿ ವಿಷ ಇರುವುದಿಲ್ಲ. ಆದರೆ ಕೆಲವು ಭಾಗದ ಅಥವಾ ಕೆಲವು ಪ್ರದೇಶದ ಉಡಗಳಲ್ಲಿ ವಿಷ ಇರುವುದು ಕಂಡು ಬಂದಿದೆ. ಹಾವಿನ ಹಾಗೆ ಉಡಕ್ಕೆ ಎರಡು ನಾಲಿಗಳಿವೆ. ಒರಾಟದ ಚರ್ಮದ ಮೇಲೆ ಬಿಳಿ ಬಣ್ಣದ ಚುಕ್ಕಿಗಳಿವೆ, ನಾಲ್ಕು ಕಾಲುಗಳಲ್ಲಿ ಮೊನಚಾದ ಉಗುರುಗಳು ಮರ ಹತ್ತಲು ಸಹಾಯವಾಗಿವೆ ಹಾಗೂ ಬಾರಕೋಲನಂತ ಉದ್ದನೆಯ ಬಾಲ. ಈ ಪ್ರಾಣಿಯಲ್ಲಿ ಕಂಡು ಬರುತ್ತದೆ.

ಇವುಗಳು ನೀರಿನಲ್ಲಿ ಈಜುತ್ತವೆ. ನೆಲದ ಮೇಲೆ ವಾಸಿಸುವ ಈ ಪ್ರಾಣಿಗಳು ಪಕ್ಷಿಯ ಮೊಟ್ಟೆ, ಏಡಿ, ಮೀನು, ಸತ್ತ ಜೀವಿಗಳ ಅವಶೇಷಗಳು ಹಾಗೂ ಮೊಸಳೆಯ ಮೊಟ್ಟೆಗಳನ್ನು ತಿನ್ನುತ್ತವೆ.

ಚಿತ್ರ,ಬರಹ: ಈರಪ್ಪ ನಾಯ್ಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.