ADVERTISEMENT

ಧಾರವಾಡ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 5:48 IST
Last Updated 24 ಮಾರ್ಚ್ 2023, 5:48 IST

ಧಾರವಾಡ: ಗರಗ ಠಾಣೆ ವ್ಯಾಪ್ತಿಯ ತೇಗೂರು ಚೆಕ್‌ಪೋಸ್ಟ್‌ ಬಳಿ ಗುರುವಾರ ಮಧ್ಯಾಹ್ನ ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹53ಲಕ್ಷವನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಕಾರನ್ನು ತೇಗೂರು ಚೆಕ್‌ಪೋಸ್ಟ್ ಬಳಿ ತಪಾಸಣೆಗೆ ಒಳಪಡಿಸಿದ ಪೊಲೀಸರಿಗೆ, ಕಾರಿನ ಡಿಕ್ಕಿಯಲ್ಲಿ ನಗದು ಪತ್ತೆಯಾಗಿದೆ. ಕಾರಿನಲ್ಲಿ ಸಂಜೀವ ಹಿರೇಮಠ ಅವರೊಬ್ಬರೇ ಪ್ರಯಾಣಿಸುತ್ತಿದ್ದರು. ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಇದೇ ಠಾಣಾ ವ್ಯಾಪ್ತಿಯಲ್ಲಿ ₹3ಲಕ್ಷ, ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ₹1.99ಲಕ್ಷ, ಕುಂದಗೋಳ ಠಾಣೆ ವ್ಯಾಪ್ತಿಯಲ್ಲಿ ₹1.1ಲಕ್ಷ ದಾಖಲೆ ಇಲ್ಲದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಕ್ರಮ ಚಟುವಟಿಕೆ: ಮೂವರು ಗಡಿಪಾರು

ಧಾರವಾಡ: ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಯಾದ ಮೂವರನ್ನು ಜಿಲ್ಲಾ ಪೊಲೀಸರು ಗಡಿಪಾರು ಮಾಡಿದ್ದಾರೆ.

ಪಡಿತರ ಅಕ್ಕಿ ಅಕ್ರಮ ದಾಸ್ತಾನು ಸೇರಿದಂತೆ ವಿವಿಧ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಮಂಜುನಾಥ ಹರ್ಲಾಪುರ ಎಂಬಾತನನ್ನು ಬೀದರ್‌ಗೆ ಗಡಿಪಾರು ಮಾಡಲಾಗಿದೆ.

ಪರಿಶಿಷ್ಟ ಜಾತಿ ದೌರ್ಜನ್ಯ ಪ್ರಕರಣದಲ್ಲಿ ವ್ಯಕ್ತಿಯ ಕೊಲೆ ಹಾಗೂ ಕೊಲೆ ಯತ್ನ ಮತ್ತು ಅಕ್ರಮವಾಗಿ ಮದ್ಯ ದಾಸ್ತಾನು ಪ್ರಕರಣಗಳಿಗೆ ಸಂಬಂಧಿಸಿದಂತೆ ತುಪ್ಪದಕುರುಹಟ್ಟಿಯ ಕುಮಾರ ಗದ್ದಿಗೌಡರ ಎಂಬಾತನನ್ನು ಗದಗ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಜೂಜು ಅಡ್ಡೆ ನಡೆಸುತ್ತಿದ್ದ ಹಾಗೂ 23 ಜೂಜಾಟ ಪ್ರಕರಣಗಳಲ್ಲಿ ಬಂಧಿತನಾಗಿದ್ದ ಪರಶುರಾಮ ಹಣಬೆ ಎಂಬುವವನನ್ನು ಬಾಗಲಕೋಟೆಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.