ADVERTISEMENT

ಹಜ್‌ ಭವನಕ್ಕೆ ಜಾಗ: ಗ್ರಾಮಸ್ಥರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 17:00 IST
Last Updated 19 ಜುಲೈ 2021, 17:00 IST
ಬಿಡನಾಳ ಗ್ರಾಮದಲ್ಲಿ ಹಜ್‌ ಭವನ ನಿರ್ಮಾಣಕ್ಕೆ ಜಾಗ ನೀಡುತ್ತಿರುವ ಪಾಲಿಕೆ ನಿರ್ಧಾರ ವಿರೋಧಿಸಿ ಸ್ಥಳೀಯರು ಸೋಮವಾರ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌ ಅವರಿಗೆ ಮನವಿ ಸಲ್ಲಿಸಿದರು
ಬಿಡನಾಳ ಗ್ರಾಮದಲ್ಲಿ ಹಜ್‌ ಭವನ ನಿರ್ಮಾಣಕ್ಕೆ ಜಾಗ ನೀಡುತ್ತಿರುವ ಪಾಲಿಕೆ ನಿರ್ಧಾರ ವಿರೋಧಿಸಿ ಸ್ಥಳೀಯರು ಸೋಮವಾರ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌ ಅವರಿಗೆ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಸೇರಿದ ಬಿಡನಾಳ ಗ್ರಾಮದಲ್ಲಿರುವ 1.20 ಎಕರೆ ಜಾಗವನ್ನು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್‌ ಮತ್ತು ವಕ್ಫ್‌ ಇಲಾಖೆಗೆ ಹಸ್ತಾಂತರಿಸುವ ಪಾಲಿಕೆ ನಿರ್ಧಾರಕ್ಕೆ ಬಿಡನಾಳ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿರುವ ಅವರು, ‘ಹಸ್ತಾಂತರಿಸಲು ನಿರ್ಧರಿಸಿರುವ ಉದ್ದೇಶಿತ ಜಾಗದಲ್ಲಿ ಬ್ರಹ್ಮಲಿಂಗೇಶ್ವರ, ಬನ್ನಿ ಮಹಾಕಾಳಿ, ವೀರಭದ್ರೇಶ್ವರ, ಹೇಮಂತರ, ಮರಗಮ್ಮ ಗ್ರಾಮ ದೇವತೆ, ಮೈಲಾರಲಿಂಗ, ವೀರ ಹನುಮಾನ, ಕರಿಯಮ್ಮ, ಗಣಪತಿ ದೇವಸ್ಥಾನ ಹಾಗೂ ಶಾಲೆ ಇವೆ. ಅಲ್ಲಿ ಹಜ್‌ ಭವನ ನಿರ್ಮಾಣವಾದರೆ ಅನೇಕ ವರ್ಷಗಳಿಂದ ಆಚರಿಸುತ್ತ ಬಂದಿರುವ ಹಬ್ಬ, ಉತ್ಸವಗಳಿಗೆ ತೊಂದರೆಯಾಗಲಿದೆ. ಇದರಿಂದ ಗಲಭೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದ್ದಾರೆ.

‘ಬಿಡನಾಳ ಗ್ರಾಮದಲ್ಲಿ ನಾಲ್ಕು ಶಾಲೆಗಳಿದ್ದು, ಉದ್ದೇಶಿತ ಸ್ಥಳದಲ್ಲಿ 15 ವರ್ಷಗಳಿಂದ ಶಾಲೆಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತ ಬಂದಿವೆ. 10 ಸಾವಿರದಷ್ಟು ಜನಸಂಖ್ಯೆ ಇರುವ ಈ ಭಾಗದ ಜನರಿಗೆ ಇದು ಆಟದ ಮೈದಾನ. ಇಷ್ಟು ವರ್ಷ ಅನೇಕ ಸಮುದಾಯದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಜಾಗ ನೀಡಬೇಕೆಂದು ಮನವಿ ಸಲ್ಲಿಸಿದ್ದರೂ, ಅದಕ್ಕೆ ನೀಡದೆ ಈಗ ಏಕಾಏಕಿ ಹಜ್‌ ಭವನ ನಿರ್ಮಾಣ ಮಾಡಲು ನೀಡುತ್ತಿರುವುದು ಆತಂಕದ ಸಂಗತಿ. ಕೂಡಲೇ ನಿರ್ಧಾರ ಬದಲಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಬಸವರಾಜ ವಾಲೀಕಾರ, ಗುರುನಾತ ಈರಗಾರ, ಶಿವಪ್ಪ ಅಡವಿ, ಶಿವರಾಜ ಈರಗಾರ, ಮನೋಜ ಗೋಳನ್ನವರ, ಫಕ್ಕೀರೇಶ ಎಚ್‌., ಸಂತೋಷ ಕುಂಬೀರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.