ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆಯ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆ ಆರಂಭಿಸಿದ್ದಾರೆ.
ಗುರುವಾರ ನಸುಕಿನಲ್ಲೇ ಇಲ್ಲಿನ ಉಪನಗರ ಠಾಣೆಗೆ ಕರೆಯಿಸಿಕೊಂಡಿರುವ ಅಧಿಕಾರಿಗಳು, ಸುಧೀರ್ಘ ವಿಚಾರಣೆ ನಡೆಸಿದ್ದಾರೆ.
2016ರ ಜೂನ್ 15ರಂದು ನಡೆದಿದ್ದ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಕೈವಾಡ ಇದೆ ಎಂದು ಯೋಗೀಶ್ ಗೌಡ ಕುಟುಂಬ ಆರೋಪಿಸಿತ್ತು. ಕಳೆದ ವಿಧಾನಸಭೆ ಹಾಗೂ ಸಂಸತ್ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಸ್ಪರ್ಧಿಸಿದ್ದಾಗಲೂ ಕೊಲೆ ವಿಷಯವೇ ಪ್ರಮುಖವಾಗಿ ಕೇಳಿಬಂದಿತ್ತು.
ಇದನ್ನೂ ಓದಿ... ಆರೋಪ, ಸಾಕ್ಷ್ಯಾಧಾರ ಕಾರಣ ವಿನಯ ಕುಲಕರ್ಣಿ ಬಂಧನ: ಯಡಿಯೂರಪ್ಪ
ವಿನಯ ಕುಲಕರ್ಣಿ ಸೋದರ ವಿಚಾರಣೆಗೆ ಹಾಜರು
ಧಾರವಾಡ: ಸಿಬಿಐ ವಿಚಾರಣೆಗೆ ವಿನಯ ಕುಲಕರ್ಣಿ ಹಜರಾಗಿರುವ ಬೆನ್ನಲ್ಲೇ, ಅವರ ಸೋದರ ವಿಜಯ ಕುಲಕರ್ಣಿಯನ್ನು ಸಿಬಿಐ ವಿಚಾರಣೆಗೆ ಕರೆಯಿಸಿದೆ. ಜತೆಗೆ ಅವರ ಆಪ್ತ ಶ್ರೀ ಪಾಟೀಲ ಅವರನ್ನೂ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆ ನಡೆಯುತ್ತಿರುವ ಉಪನಗರ ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ‘ಸಿಬಿಐ ಪಾರದರ್ಶಕವಾಗಿ ತನಿಖೆ ನಡೆಸಲಿದೆ. ವಿನಯ ಕುಲಕರ್ಣಿ ಆರೋಪ ಮುಕ್ತರಾಗಲಿದ್ದಾರೆ’ ಎಂದರು. ಠಾಣೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.