ADVERTISEMENT

‘ಸರ್ಕಾರಕ್ಕೆ ಮಳೆ ಹಾನಿ ವರದಿ ಸಲ್ಲಿಸಿ, ಪರಿಹಾರ ಕೊಡಿಸಲು ಕ್ರಮ’

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ ಲಾಡ್‌ ಭೇಟಿ– ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:35 IST
Last Updated 22 ಅಕ್ಟೋಬರ್ 2024, 15:35 IST
ಧಾರವಾಡ ತಾಲ್ಲೂಕಿನ ಅಮ್ಮಿನಭಾವಿ ಗ್ರಾಮ ಸಮೀಪದ ಹೊಲದಲ್ಲಿ ಈರುಳ್ಳಿ ಬೆಳೆ ಹಾಳಾಗಿರುವುದನ್ನು ಸಚಿವ ಸಂತೋಷ್‌ ಲಾಡ್‌ ವೀಕ್ಷಿಸಿದರು.
ಧಾರವಾಡ ತಾಲ್ಲೂಕಿನ ಅಮ್ಮಿನಭಾವಿ ಗ್ರಾಮ ಸಮೀಪದ ಹೊಲದಲ್ಲಿ ಈರುಳ್ಳಿ ಬೆಳೆ ಹಾಳಾಗಿರುವುದನ್ನು ಸಚಿವ ಸಂತೋಷ್‌ ಲಾಡ್‌ ವೀಕ್ಷಿಸಿದರು.    

ಧಾರವಾಡ: ಮಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದು ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ತಾಲ್ಲೂಕಿನ ಅಮ್ಮಿನಭಾವಿ ಹೋಬಳಿಯಲ್ಲಿ ಮಂಗಳವಾರ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ ನಂತರ ರೈತರೊಂದಿಗೆ ಮಾತನಾಡಿದರು. ಬೆಳೆ ಹಾನಿ ಕುರಿತು ರೈತರ ಜಮೀನನ್ನು ನಿಖರವಾಗಿ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆ ನಷ್ಟ ಕುರಿತು ತ್ವರಿತವಾಗಿ ವರದಿ ಸಿದ್ದಪಡಿಸಲು ಹಾಗೂ ವಿಮೆ ಮಾಡಿರುವ ರೈತರಿಗೆ ತಕ್ಷಣ ಪರಿಹಾರ ಸಿಗುವಂತೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಈ ವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಧಿಕಾರಿಗಳು, ಸಿಬ್ಬಂದಿ ಕೇಂದ್ರ ಸ್ಥಳದಲ್ಲಿ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸಲು, ಸಮಸ್ಯೆಯಾದರೆ ಜನರಿಗೆ ನೆರವಾಗಲು ಸೂಚಿಸಲಾಗಿದೆ ಎಂದರು.

ADVERTISEMENT

ಬೆಳೆ ಆ್ಯಪ್ ಹಾಗೂ ಬೆಳೆ ವಿಮೆ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಜಾಗೃತಿ ಮೂಡಿಸಬೇಕು. ಈ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಆಧಿಕಾರಿಗಳಿಗೆ ಸಚಿವ ಲಾಡ್‌ ತಿಳಿಸಿದರು.

ಮಳೆಯಿಂದಾಗಿ ತೀವ್ರ ಹಾನಿಯಾಗಿರುವ ಅಮ್ಮಿನಭಾವಿಯ ಮಡಿವಾಳಪ್ಪ. ಹನಮಂತಪ್ಪ. ಭೋವಿ ಅವರ ಮನೆಗಳನ್ನು ಪರಿಶೀಲಿಸಿದರು. ಪರಿಹಾರ ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮಳೆಯಿಂದಾಗಿ ಗ್ರಾಮದಲ್ಲಿ ಒಟ್ಟು 14 ಮನೆಗಳು ಹಾನಿಯಾಗಿವೆ ಎಂದು ತಹಶೀಲ್ದಾರ್‌ ಡಿ.ಎಚ್.ಹೂಗಾರ ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ. ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಸಿ ಭದ್ರಣ್ಣವರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಾಲೂಕ ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಇತರರು ಇದ್ದರು.

ಧಾರವಾಡ ತಾಲ್ಲೂಕಿನ ಅಮ್ಮಿನಭಾವಿ ಗ್ರಾಮ ಸಮೀಪದ ಹೊಲದಲ್ಲಿ ಹತ್ತಿ ಬೆಳೆಯು ಗಿಡದಲ್ಲಿ ಹಾಳಾಗಿರುವುದನ್ನು ಸಚಿವ ಸಂತೋಷ್‌ ಲಾಡ್‌ ವೀಕ್ಷಿಸಿದರು.

ಪರಿಹಾರ ಕೊಡಿಸಲು ಮನವಿ

ಅಮ್ಮಿನಭಾವಿ ಗ್ರಾಮದ ರೈತ ಬಸಪ್ಪ.ಧರ್ಮಪ್ಪ.ರಸಾಳೆ ಅವರ ಹೊಲದಲ್ಲಿ ಕೊಯ್ಲಿಗೆ ಬಂದಿದ್ದ ಈರುಳ್ಳಿ ಬೆಳೆ ಹಾನಿಯಾಗಿರುವುದ‌ನ್ನು ಸಚಿವ ಲಾಡ್‌ ಪರಿಶೀಲಿಸಿದರು. ‘ಎರಡು ಎಕರೆಯಲ್ಲಿ ಮಳೆ ಆಶ್ರಿತ ಬೆಳೆಯಾಗಿ ಈರುಳ್ಳಿಯನ್ನು ಬೆಳೆದಿದ್ದೇನೆ. ಕೊಯ್ಲಿಗೆ ಬಂದ ಸಮಯದಲ್ಲಿ ಮಳೆಯಿಂದಾಗಿ ಈರುಳ್ಳಿ ಕೊಳೆಯುತ್ತಿದೆ. ಇದರಿಂದ ತುಂಬಾ ನಷ್ಟವಾಗಿದೆ ಪರಿಹಾರ ದೊರಕಿಸಿಕೊಡಿ’ ಎಂದು ರೈತ ಬಸಪ್ಪ ಅವರು ಸಚಿವರಿಗೆ ಮನವಿ ಮಾಡಿದರು. ‘ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಯು ಮಳೆಯಿಂದಾಗಿ ಗಿಡದಲ್ಲಿಯೇ ಹಾಳಾಗಿದೆ. ಮುಂದಿನ ಬಿತ್ತನೆಗಾಗಿ ನೆರವು ದೊರಕಿಸಕೊಡಬೇಕು’ ಎಂದು ಅಮ್ಮಿನಭಾವಿಯ ರೈತ ಮಹಿಳೆ ಫಕ್ಕಿರವ್ವಾ. ಮರಬಸಪ್ಪ. ಯಡಳ್ಳಿ ಅವರು ಸಚಿವರಿಗೆ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.