
ನವಲಗುಂದ: ಪ್ರಜಾಪ್ರಭುತ್ವ ರಕ್ಷಿಸಬೇಕು ಮತ್ತು ಮತದಾರರ ಹಕ್ಕನ್ನು ಉಳಿಸಬೇಕು ಎಂಬ ಉದ್ದೇಶದಿಂದ ಮತಗಳವು ನಡೆಯುತ್ತಿರುವುದನ್ನು ತಡೆಯಲು ವಿಫಲವಾಗಿರುವ ಚುನಾವಣಾ ಆಯೋಗವನ್ನು ಎಚ್ಚರಿಸಲು ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೇವಾಡಿ ಹೇಳಿದರು.
ಕಾಂಗ್ರೆಸ್ ಭವನ, ರಾಜಕುಮಾರ ಭವನ ಹಾಗೂ ಇತರಡೇ ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ನಡೆಸತ್ತಿರುವ ಜನಜಾಗೃತಿ ಅಭಿಯಾನವನ್ನು ಬೆಂಬಲಿಸಿ ಭಾನುವಾರ ನಡೆದ ಸಹಿ ಸಂಗ್ರಹ ಅಭಿಯಾನ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣಾ ಆಯೋಗವು ನ್ಯಾಯ ಬದ್ಧವಾಗಿ ಚುನಾವಣೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಅವರು, ಈರೀತಿ ಅಕ್ರಮ ಮಾರ್ಗದಿಂದ ಗೆಲುವು ಸಾಧಿಸಿದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಇರುವುದಿಲ್ಲ ಎಂದರು.
ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ. ಪ್ರಜಾಪ್ರಭುತ್ವದ ಭದ್ರ ಬುನಾದಿಯೇ ಪಾರದರ್ಶಕ ಮತದಾನ ವ್ಯವಸ್ಥೆ. ಆದರೆ ಈ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಬಿಜೆಪಿ ಮತಗಳು ಕೃತ್ಯದಲ್ಲಿ ತೊಡಗುವ ಮೂಲಕ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಒಡ್ಡುತ್ತಿದೆ ಎಂದು ಹೇಳಿದರು.
ನವಲಗುಂದ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಿಂಗಪ್ಪ ಕುರುಬರ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅರುಣಕುಮಾರ ಸುಣಗಾರ, ಉಪಾಧ್ಯಕ್ಷ ಅಸ್ಲಮ್ ಜಂಗಲನಾಯಕ, ಯುವ ಮುಖಂಡರಾದ ಪ್ರಕಾಶ ಗೋಂಧಳೆ, ಶಿವಕುಮಾರ ನಾಯ್ಕರ ಸೇರಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.