ADVERTISEMENT

ಖಾದಿ ಉಳಿವಿಗಾಗಿ ಹೋರಾಟ: ವಿನಯ್‌ ಗುರೂಜಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 7:16 IST
Last Updated 30 ಜನವರಿ 2021, 7:16 IST
   

ಹುಬ್ಬಳ್ಳಿ: ಖಾದಿ ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕರರಿಗೆ ವಾರಕ್ಕೊಮ್ಮೆಯಾದರೂ ಖಾದಿ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಉಪವಾಸ ಸತ್ಯಾಗ್ರಹ ಮಾಡಿಯಾದರೂ, ಖಾದಿ ನೇಕಾರರ ಉಳಿವಿಗೆ ಶ್ರಮಿಸುತ್ತೇನೆ ಎಂದು ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ ಸಂಸ್ಫಾಪಕ ವಿನಯ್‌ ಗುರೂಜಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ ನೋಡಿ ಹೆಮ್ಮೆ ಪಡುತ್ತೇವೆ. ಆದರೆ, ಅದನ್ನು ಸಿದ್ಧಪಡಿಸುವವರ ಸಂಕಷ್ಟ ನೋಡುತ್ತಿಲ್ಲ. ಟ್ರಸ್ಟ್‌ ವತಿಯಿಂದ ಅವರಿಗೆ ಎರಡು ತಿಂಗಳ ದಿನಸಿ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರೆಯಬೇಕಾದ ನೆರವನ್ನೂ ಕೊಡಿಸುತ್ತೇವೆ ಎಂದರು.

ರೈತರ ಶೋಷಣೆಯಾದರೆ ಹೋರಾಟ ಮಾಡಲು ಸಿದ್ಧ. ಕೃಷಿ ಕಾಯ್ದೆಗಳ ಬಗೆಗೂ ಪ್ರಧಾನಮಂತ್ರಿ ಅವರಿಗೆ ಪತ್ರ ಬರೆಯಲಾಗಿದೆ. 15 ದಿನಗಳಲ್ಲಿ ಉತ್ತರ ಬಾರದಿದ್ದರೆ, ಅವಶ್ಯಕತೆ ಬಿದ್ದಲ್ಲಿ ದೆಹಲಿಯ ಹೋರಾಟದಲ್ಲಿ ಬಾಗಿಯಗುತ್ತೇನೆ ಎಂದರು. ಪ್ರಧಾನಮಂತ್ರಿಗೆ ಬರೆದ ಪತ್ರದಲ್ಲಿ ಏನಿದೆ ಎಂಬ ಪ್ರಶ್ನೆಗೆ, ಉತ್ತರಿಸಲಿಲ್ಲ.

ADVERTISEMENT

ರೈತರೊಂದಿಗೆ ಬೆರೆತಾಗ ಮಾತ್ರ ಅವರ ಸಮಸ್ಯೆಗಳ ಅರಿವಾಗುತ್ತದೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಅವರೂ ಅವರೊಂದಿಗೆ ಬೆರೆಯಬೇಕು. ಒಂದೆರಡು ದಿನಗಳ ಕಾಲ ಅವರೊಂದಿಗಿರಬೇಕು. ರಾಮನ ಮಂದಿರ ನಿರ್ಮಣಕ್ಕೆ ಕ್ಕೆ ನೆರವು ನೀಡುವುದಂತೆ ರೈತರ ಸಂಕಷ್ಟಕ್ಕೂ ಜನರು ಸ್ಪಂದಿಸಬೇಕು ಎಂದರು.

ದುಃಖಿಗಳ ಬಗೆಗೆ ಭಾಷಣ ಮಾಡದೇ ಅವರಲ್ಲಿ ದುಃಖದಲ್ಲಿ ಭಾಗಿಯಾದಂತಹ ಮಹಾನ್‌ ಸಂತ ಮಹಾತ್ಮ ಗಾಂಧೀಜಿ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. ಗಾಂಧೀಜಿ ಅವರ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.