
ನವಲಗುಂದ: ‘ಇಚ್ಛಾಶಕ್ತಿಯೊಂದಿದ್ದರೆ ಮಕ್ಕಳು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು’ ಎಂದು ಧಾರವಾಡದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಮಹಾರಾಜರು ಹೇಳಿದರು.
ಅವರು ಮಂಗಳವಾರ ಸ್ಥಳೀಯ ಶ್ರೀ ಜಗದ್ಗುರು ಅಜಾತ ನಾಗಲಿಂಗ ಸ್ವಾಮೀಜಿ ವಿದ್ಯಾಪೀಠದ ಪ್ರೌಢಶಾಲೆಯ 37ನೇ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಜಾತ ನಾಗಲಿಂಗಸ್ವಾಮಿ ಮಠದ ಪೀಠಾಧ್ಯಕ್ಷ ವೀರೇಂದ್ರ ಸ್ವಾಮೀಜಿ ಮಾತನಾಡಿ, ‘ಮಕ್ಕಳು ಈ ದೇಶದ ಸಂಪತ್ತು, ಅವರು ಇಂದು ಸಾಧನೆ ಮಾಡಲು ವಿಫುಲವಾದ ಅವಕಾಶಗಳಿವೆ. ಶ್ರಮವಹಿಸಿ ಸಾಧನೆ ಮಾಡಿ ತಂದೆ-ತಾಯಿ ಮತ್ತು ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು’ ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಪ್ರೌಢಶಾಲೆಯ ಮೂವರು ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಮ್ಮ ವೈಯಕ್ತಿಯ ವಿಷಯದಲ್ಲಿ ಶೇ 100 ಫಲಿತಾಂಶ ಸಾಧಿಸಿದ್ದಕ್ಕಾಗಿ ಬಂಗಾರದ ಪದಕ ನೀಡಿ ಗೌರವಿಸಲಾಯಿತು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಪ್ರಜ್ವಲ ಸುರೇಶ ಪಾದಗಟ್ಟಿ ಇವರನ್ನು ಸತ್ಕರಿಸಿ. ವಿವಿಧ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ವಿಜಯಕುಮಾರ ಪತ್ತಾರ, ಮೋಹನ ನರಗುಂದ, ಬಿ.ಎಂ.ಬಡಿಗೇರ ಭಾಗವಹಿಸಿದ್ದರು. ಮನೋಜ ಮಹೇಂದ್ರಕರ, ಎ.ಆರ್.ಬನ್ನಿಕೋಡ ನಿರೂಪಿಸಿದರು. ಮುಖ್ಯಶಿಕ್ಷಕ ಎಲ್.ಎಚ್.ಕಮ್ಮಾರ ಸ್ವಾಗತಿಸಿದರು. ಎ.ಎನ್.ಹಿರೇಮಠ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.