ಹುಬ್ಬಳ್ಳಿ: ವಿಶ್ವ ಮಹಿಳಾ ದಿನಾಚರಣೆಯನ್ನು ಹುಬ್ಬಳ್ಳಿಯ ವಿವಿಧ ಸಂಘ– ಸಂಸ್ಥೆಗಳಲ್ಲಿ ಶುಕ್ರವಾರ ಆಚರಿಸಲಾಯಿತು.
ಹೂಲಾಲ ಹುಬ್ಬಳ್ಳಿ ಲೇಡಿಸ್ ಕ್ಲಬ್ ಸದಸ್ಯರು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ರಾಷ್ಟ್ರ ಧ್ವಜ ತಯಾರಿಕಾ ಘಟಕದ 80 ಮಹಿಳಾ ಉದ್ಯೋಗಿಗಳನ್ನು ಸನ್ಮಾನಿಸಿದರು. ಜ್ಯೋತಿ ಪ್ರಹ್ಲಾದ ಜೋಶಿ, ತ್ರಿಶಲಾ ಮಾಲಗತ್ತಿ, ಪದ್ಮಶ್ರೀ ಮೊರಬದ, ಅನಿತಾ ರೋಖಡೆ, ಅರುಣಾ ಉಪ್ಪಿನ. ಶಾಲಿನಿ ನವಲೂರು, ಅನ್ನಪೂರ್ಣ ಕೋಟಿ ಇದ್ದರು.
ವಿದ್ಯಾನಗರದ ಎಂವಿಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಸೀರೆ ಹಾಗೂ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದರು. ಇದೇ ಸಂದರ್ಭದಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು. ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ನೀಡಲಾಯಿತು.
ಚಿಂತನ ವೇದಿಕೆ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಉಣಕಲ್ನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಮಹಿಳೆಯರ ಬಗ್ಗೆ ಅವಮಾನಕರ ಮಾತುಗಳನ್ನಾಡುವುದು ಆರೋಗ್ಯಕರ ಬೆಳವಣಿಗೆಯಲ್ಲ. ಮಾತನಾಡಿದವರು ಸಚಿವರೇ ಇರಲಿ, ಗಣ್ಯರೆ ಆಗಿರಲಿ ಮೊದಲು ನಮ್ಮ ಸಂಸ್ಕೃತಿ ಪರಂಪರೆಯನ್ನು ಅರಿಯಬೇಕು ಎಂದು ಲೇಖಕಿ ಅರ್ಚನಾ ಧಿರೇಂದ್ರ ಹೇಳಿದರು.
ಮಹಿಳೆಯ ಬಗ್ಗೆ ಅವಮಾನಕರವಾಗಿ ಮಾತನಾಡಿದರೆ, ತಾಯಿ ಸಂಸ್ಕೃತಿ ಕಲಿಸಿಲ್ಲ ಎಂದು ಸಮಾಜ ಹಳಿಯುತ್ತದೆ. ಮತ್ತೆ ಅಲ್ಲಿ ಮಹಿಳೆಯ ಶೋಷಣೆ ನಡೆಯುತ್ತದೆ ಎಂದು ಚಿಂತಕಿ ಅನಿತಾ ಅಶೋಕ ವಿಷಾದಿಸಿದರು.
ಅಕ್ಷತಾ ಕುಲಕರ್ಣಿ, ಕೆ. ಸ್ತುತಿ ಅವರು ಮಹಿಳಾ ಶೋಷಣೆ ಕುರಿತು ಮಾತನಾಡಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕ.ಚು.ಸಾ.ಪ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಸ್ವಾಗತಿಸಿದರು. ಅನಂತ ಕುಲಕರ್ಣಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.