ADVERTISEMENT

ರಾಷ್ಟ್ರಮುಖಿಯಾಗಿ ಕೆಲಸ ಮಾಡಿ: ಕಾಗೇರಿ

ಸಮುತ್ಕರ್ಷ ಐಎಎಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 16:06 IST
Last Updated 31 ಜುಲೈ 2022, 16:06 IST
ಹುಬ್ಬಳ್ಳಿಯ ಸಮುತ್ಕರ್ಷ ಐಎಎಸ್‌ ಅಕಾಡೆಮಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣಪತ್ರ ವಿತರಿಸಿದರು. ರಾಘವೇಂದ್ರ ಕಾಗವಾಡ, ಡಾ.ವಿಜಯಭಾಸ್ಕರ ರೆಡ್ಡಿ ಇದ್ದಾರೆ
ಹುಬ್ಬಳ್ಳಿಯ ಸಮುತ್ಕರ್ಷ ಐಎಎಸ್‌ ಅಕಾಡೆಮಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣಪತ್ರ ವಿತರಿಸಿದರು. ರಾಘವೇಂದ್ರ ಕಾಗವಾಡ, ಡಾ.ವಿಜಯಭಾಸ್ಕರ ರೆಡ್ಡಿ ಇದ್ದಾರೆ   

ಹುಬ್ಬಳ್ಳಿ: ‘ಐಎಎಸ್‌, ಐಪಿಎಸ್ ಮತ್ತು ಕೆಎಎಸ್‌ ಅಧಿಕಾರಿಗಳಾಗುವವರು ಸಮಾಜಮುಖಿ ಮತ್ತು ರಾಷ್ಟ್ರಮುಖಿಯಾಗಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಮುತ್ಕರ್ಷ ಟ್ರಸ್ಟ್‌ನ ಸಮುತ್ಕರ್ಷ ಐಎಎಸ್‌ ಅಕಾಡೆಮಿ ವತಿಯಿಂದ ನಗರದ ಬಿವಿಬಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ 2022ನೇ ಬ್ಯಾಚ್‌ನ ಅಭ್ಯರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾರ್ಯಾಂಗದ ಮೇಲೆ ಮಹತ್ವದ ಜವಾಬ್ದಾರಿ ಇದೆ. ಆದರೆ, ನಿರೀಕ್ಷೆಗೂ ಮೀರಿ ತನ್ನ ಮೌಲ್ಯಗಳು ಮತ್ತು ಜವಾಬ್ದಾರಿಗಳನ್ನು ಇಂದು ಕಳೆದುಕೊಂಡಿದೆ. ಬ್ರಿಟಿಷ್‌ ಗುಲಾಮಿತನದ ಮಾನಸಿಕ ಸ್ಥಿತಿಯಿಂದ ಅಧಿಕಾರಿಗಳು ಹೊರಬರಬೇಕು’ ಎಂದರು.

‘ಸರ್ಕಾರದ ಆದೇಶಗಳಿಗೆ ಕಾಯ್ದೆ, ಕಾನೂನುಗಳ ನೆಪ ಹೆಳಿ ಅಡ್ಡಗಾಲು ಹಾಕಿದರೆ ಯಾವ ಯೋಜನೆಗಳೂ ಅನುಷ್ಠಾನವಾಗುವುದಿಲ್ಲ. ಇದರಿಂದ ಸಾಮಾನ್ಯ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಐಎಎಸ್ ಅಧಿಕಾರಿಗಳಿಗೆ ತರಬೇತಿ ಕೊಡುವಾಗ ಕಾಯ್ದೆ, ಕಾನೂನು, ನಿಯಮಾವಳಿಗಳನ್ನು ತಲೆಗೆ ತುಂಬಿ, ವಸಾಹತುಶಾಹಿ ಮನಸ್ಥಿತಿ ಬೆಳೆಸಿ ಕಳಿಸುತ್ತಾರೆ. ಸಣ್ಣಪುಟ್ಟ ಅರ್ಜಿಗಳನ್ನು ಹಿಡಿದು ಬರುವವರು ಅವರ ಕಣ್ಣಿಗೆ ಕಾಣುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಜ್ಞಾನದ ಬಲದಿಂದ ಭಾರತ ಈ ಹಿಂದೆಯೇ ವಿಶ್ವ ಗುರು ಆಗಿತ್ತು. ಸೃಷ್ಟಿಯ ಸತ್ಯ ಮತ್ತು ಜೀವನದ ಸಾರ್ಥಕತೆಯ ಜ್ಞಾನವನ್ನು ಋಷಿಮುನಿಗಳು ಜಗತ್ತಿಗೆ ನೀಡಿದ್ದರು. ಅಲೆಕ್ಸಾಂಡರ್‌ನಿಂದ ಬ್ರಿಟಿಷರವರೆಗೆ ಗುಲಾಮಿತನದ ಆಡಳಿತದಿಂದಾಗಿ ನಮ್ಮ ಜ್ಞಾನ ಸಂಪತ್ತನ್ನು ಕಳೆದುಕೊಂಡಿದ್ದೇವೆ. ರಾಷ್ಟ್ರವೇ ಮೊದಲು, ಜನರ ಹಿತವೇ ಮುಖ್ಯ ಎಂದು ಮುನ್ನಡೆದರೆ ಇನ್ನು 25 ವರ್ಷಗಳಲ್ಲಿ ಭಾರತ ವಿಶ್ವಗುರುವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಅಭ್ಯರ್ಥಿಗಳು ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡುವ ಗುರಿ ಇಟ್ಟುಕೊಳ್ಳಬೇಕು. ಐಎಎಸ್‌ ಅಧಿಕಾರಿ ಆಗದಿದ್ದರೂ ನಿರಾಶರಾಗಬೇಕಿಲ್ಲ. ಸಾಕಷ್ಟು ಅವಕಾಗಳು ಇವೆ. ಯಾವುದೇ ಕ್ಷೇತ್ರವಾದರೂ ಜನಪರವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಆರ್‌ಎಸ್‌ಎಸ್ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಮಾತನಾಡಿ, ‘ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಲು ಸಾಕಷ್ಟು ಪರಿಶ್ರಮದ ಹಾದಿ ಸವೆಸಬೇಕು. ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆಯನ್ನು ಅಭ್ಯರ್ಥಿಗಳು ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಡಾ. ವಿಜಯಭಾಸ್ಕರ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಶಾಲ ಸಂಗಣ್ಣವರ, ಜಿತೇಂದ್ರ ನಾಯಕ, ಸಂತೋಷ ಕೆಲೋಜಿ, ಎಂ.ಆರ್‌.ಪಾಟೀಲ ಇದ್ದರು. ಸಮುತ್ಕರ್ಷ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಮತ್ತು ಅವರ ಪಾಲಕರು ಅನಿಸಿಕೆ ಹಂಚಿಕೊಂಡರು.

ಪರಿಸರ ಸೂಕ್ಷ್ಮ ವಲಯ; ಪ್ರತ್ಯೇಕ ಸಮಿತಿ ರಚನೆಗೆ ಕೇಂದ್ರ ಒಪ್ಪಿಗೆ–ಕಾಗೇರಿ: ‘ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಘೋಷಣೆಯಿಂದ ಆಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಮತ್ತು ಜನಪರ ನಿಯಮಗಳನ್ನು ರೂಪಿಸಲು ಪ್ರತ್ಯೇಕ ಸಮಿತಿ ರಚನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಒಪ್ಪಿಗೆ ನೀಡಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಶ್ಚಿಮ ಘಟ್ಟ ಕುರಿತಅಧಿಸೂಚನೆಯ ಪರಿಣಾಮಗಳ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಕೇಂದ್ರ ಪರಿಸರ ಸಚಿವರಿಗೆ ಮಲೆನಾಡು ಮತ್ತು ಕರಾವಳಿ ಭಾಗದ ಶಾಸಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಪ್ರತ್ಯೇಕ ಸಮಿತಿ ರಚನೆಗೆ ಒಪ್ಪಿದೆ. ಸಮಿತಿಯ ಸದಸ್ಯರು ಅಧ್ಯಯನ ನಡೆಸಲು ಬಂದಾಗ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತೇವೆ’ ಎಂದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ ಶೇ 80ರಷ್ಟು ಅರಣ್ಯಪ್ರದೇಶ ಇದೆ. ಈ ಪ್ರದೇಶದಲ್ಲಿಯೇ ನಾವು ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಬೇಕು ಮತ್ತು ಪೈಪ್‌ಲೈನ್ ಅಳವಡಿಸಬೇಕು. ಬೇರೆ ಮಾರ್ಗ ಇಲ್ಲ. ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ತೊಂದರೆ ಆಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.