ADVERTISEMENT

₹3.49 ಲಕ್ಷ ಮೌಲ್ಯದ ವಸ್ತು ಕಳವು

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 10:26 IST
Last Updated 13 ಜನವರಿ 2020, 10:26 IST

ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಅಂಬಣ್ಣನವರ ಬಡಾವಣೆಯ ರಾಜೇಸಾಬ ಬಡಗಿ ಅವರ ಮನೆ ಬಾಗಿಲು ಮುರಿದ ಕಳ್ಳರು, ಒಳಗಿದ್ದ ಬಂಗಾರದ ಆಭರಣಗಳು, ನಗದು ಹಾಗೂ ಬೈಕ್‌ ಸೇರಿ ಒಟ್ಟು ₹3.49 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ರಾಜೇಸಾಬ ಅವರು ಮನೆ ಬಾಗಿಲಿಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋದ ಸಂದರ್ಭದಲ್ಲಿ ಕಳವು ಆಗಿದೆ. ಅಲ್ಮೇರಾದಲ್ಲಿ 55 ಗ್ರಾಂ ತೂಕದ ಬಂಗಾರದ ಆಭರಣಗಳು, 580 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ₹1.70 ಲಕ್ಷ ನಗದು, ಗ್ಯಾಸ್‌ ಸಿಲೆಂಡರ್‌ ಹಾಗೂ ಹೊರಗೆ ನಿಲ್ಲಿಸಿದ್ದ ಬೈಕ್‌ ಕಳವು ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

₹43,489 ಮೌಲ್ಯದ ಮದ್ಯದ ಬಾಟಲುಗಳು ಕಳವು: ಇಲ್ಲಿನ ಹಳೇಹುಬ್ಬಳ್ಳಿ ಆರ್.ಎನ್. ಶೆಟ್ಟಿ ರಸ್ತೆಯ ದುರ್ಗಾ ಕಾಂಪ್ಲೆಕ್ಸ್‌ನಲ್ಲಿರುವ ಮದ್ಯದ ಅಂಗಡಿಯ ಬಾಗಿಲು ಮುರಿದ ಕಳ್ಳರು, ₹43,489 ಮೌಲದ ಮದ್ಯದ ಬಾಟಲುಗಳನ್ನು ಹಾಗೂ ₹73,227 ನಗದು ಕಳವು ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಮೊಬೈಲ್‌ ಕಳವು: ರಸ್ತೆ ಬಳಿ ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್‌ನ್ನು ಬೈಕ್‌ ಮೇಲೆ ಬಂದ ಹಿಂಬದಿ ಸವಾರ ಕಿತ್ತುಕೊಂಡು ಪರಾರಿಯಾದ ಪ್ರಕರಣ ಇಲ್ಲಿನ ವಿಜಯ ನಗರದಲ್ಲಿ ಶನಿವಾರ ನಡೆದಿದೆ.

ನಿಲಿಜಿನ್‌ ರಸ್ತೆಯ ಹರೀಶಪ್ರಭು ಭಾಸ್ಕರ ಮೊಬೈಲ್‌ ಕಳೆದುಕೊಂಡವರು. ವಿಜಯನಗರ ಮುಖ್ಯ ರಸ್ತೆಯಲ್ಲಿ ಮೊಬೈಲ್ ನೋಡುತ್ತ ನಿಂತಿರುವಾಗ ಬೈಕ್‌ ಮೇಲೆ ಬಂದ ಹಿಂಬದಿ ಸವಾರ, ಕೆಳಗೆ ಇಳಿದು ಬಲವಂತವಾಗಿ ಮೊಬೈಲ್‌ ಕಿತ್ತುಕೊಂಡು ಹೋಗಿದ್ದಾನೆ. ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಲಕ ಸಾವು: ತಾಲ್ಲೂಕಿನ ಚನ್ನಾಪುರ ಗ್ರಾಮದ ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋದ ಬಾಲಕ ಪ್ರಕಾಶ ಗಂಜಿಗಟ್ಟಿ(16) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಯಮ ಉಲ್ಲಂಘನೆ: ಅವಳಿ ನಗರದಲ್ಲಿ ದಿ.11ರಂದು ಸಂಚಾರ ನಿಯಮ ಉಲ್ಲಂಘನೆ ಮಾಡಿದ 273 ಮಂದಿ ವಿರುದ್ಧ ದೂರು ದಾಖಲಿಸಿ, ₹1,61,200 ದಂಡ ವಸೂಲಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.