ADVERTISEMENT

ಬದುಕು ಕಟ್ಟಿಕೊಡುವ ಬರವಣಿಗೆ- ಪ್ರೊ.ಐ.ಜಿ. ಸನದಿ ಅಭಿಮತ

ಪಾಟೀಲ ಪುಟ್ಟಪ್ಪ ಜನ್ಮದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 8:43 IST
Last Updated 15 ಜನವರಿ 2022, 8:43 IST
ಧಾರವಾಡದ ರಾಯಾಪುರದಲ್ಲಿರುವ ಮಹಾಂತ ಕಾಲೇಜಿನಲ್ಲಿ ಶುಕ್ರವಾರ ಪಾಟೀಲ ಪುಟ್ಟಪ್ಪ ಅವರ 101ನೇ ಜನ್ಮದಿನ ಆಚರಿಸಲಾಯಿತು
ಧಾರವಾಡದ ರಾಯಾಪುರದಲ್ಲಿರುವ ಮಹಾಂತ ಕಾಲೇಜಿನಲ್ಲಿ ಶುಕ್ರವಾರ ಪಾಟೀಲ ಪುಟ್ಟಪ್ಪ ಅವರ 101ನೇ ಜನ್ಮದಿನ ಆಚರಿಸಲಾಯಿತು   

ಧಾರವಾಡ: ‘ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಿ ಸಾಹಿತ್ಯ ಮತ್ತು ಬರವಣಿಗೆಯತ್ತ ಒಲವು ಬೆಳೆಸಿಕೊಳ್ಳಬೇಕು. ಬರವಣಿಗೆ ಬದುಕನ್ನು ಕಟ್ಟಿ ಕೊಡುತ್ತದೆ’ ಎಂದು ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಹೇಳಿದರು.

ಎಸ್‌ಜೆಎಂ ಮಹಾಂತ ಕಾಲೇಜಿನ ಕನ್ನಡ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಪಾಟೀಲ ಪುಟ್ಟಪ್ಪ ಅವರ 101ನೇ ಜನ್ಮದಿನ ಆಚರಣೆಯಲ್ಲಿ ಅವರು ಮಾತನಾಡಿದರು.

‘ಜ್ಞಾನ ಸಂಪಾದನೆ ಜೀವನದ ಪ್ರಮುಖ ಗುರಿಯಾಗಲಿ. ಜೀವನದಲ್ಲಿ ಸತ್ಯ, ಪ್ರೇಮ, ಸಾಮರ್ಥ್ಯ, ಸೌಜನ್ಯ, ವಿನಯ ಹಾಗೂ ಸ್ವಾಭಿಮಾನದಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು.ವಿದ್ಯಾರ್ಥಿದೆಸೆಯಲ್ಲಿ ಚೈತನ್ಯದಿಂದ ಕಾರ್ಯನಿರ್ವಹಿಸಬೇಕು. ಜ್ಞಾನದ ಅರಿವು ಪಡೆಯಬೇಕು. ಸ್ವಂತ ಪ್ರಯತ್ನದಿಂದ ಸಾಧನೆಯಶಿಖರವನ್ನೇರಬೇಕು. ಸಾಧನೆಯೊಂದಿಗೆ ಸರ್ವಧರ್ಮ ಸಮಭಾವ ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶ ಕಟ್ಟುವ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಕಾಲೇಜಿನ ಪತ್ರಿಕೋದ್ಯಮ ವಿಭಾಗಗಳು ಪಾಟೀಲ ಪುಟ್ಟಪ್ಪ ಅವರ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಅವರನ್ನು ನೆನಪಿಸುವ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ‘ಪಾಟೀಲ ಪುಟ್ಟಪ್ಪ ಅವರ ಜೀವನವನ್ನು ಸ್ಮರಿಸುವುದು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ವಿದ್ಯಾರ್ಥಿಗಳ ಪ್ರಮುಖ ಆದ್ಯತೆಯಾಗಬೇಕು. ಆಗ ಮಾತ್ರ ಅವರ ಸ್ಮರಣೆಗೆ ಸಾರ್ಥಕತೆಗೆ ಅರ್ಥ ಬರುತ್ತದೆ’ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಸ್. ಶಾಂತಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪುಷ್ಪಾ ಬಸನಗೌಡರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಜಯಲಕ್ಷ್ಮಿ ಯಂಡಿಗೇರಿ, ಪ್ರೊ. ಕೆ.ಎಸ್. ಕೌಜಲಗಿ, ಸಿ.ಜಿ. ಧಾರವಾಡ ಶೆಟ್ಟರ್, ಪ್ರೊ. ಸಿ.ಕೆ. ಹುಬ್ಬಳ್ಳಿ, ಎಂ.ಬಿ. ಅಳಗವಾಡಿ, ಎಂ.ಎಸ್. ನರೇಗಲ್ ಇದ್ದರು.

ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸಿದವರ ಹಾಗೂ ಅಂತರ ಕಾಪಾಡಿಕೊಂಡವರ ಸಂಖ್ಯೆ ವಿರಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.