ಹುಬ್ಬಳ್ಳಿ: ‘ಕೆಎಲ್ಇ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಕಾಲೇಜು ಹಾಗೂ ಎಚ್.ಎಸ್. ಕೊತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಡಿ. 14ರಂದು ‘ಕಲರವ’ ಎಂಬ ರಾಜ್ಯಮಟ್ಟದ ಯುವ ಜನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಕಾಲೇಜಿನ ಪ್ರಾಚಾರ್ಯೆ ಉಮಾ ನೇರ್ಲೆ ಹೇಳಿದರು.
‘ಎಂಟು ವಿಭಾಗಗಳಲ್ಲಿ ಜನಪದ ಗೀತೆ, ನೃತ್ಯ, ಚಿತ್ರಕಲೆ, ರಸಪ್ರಶ್ನೆ, ಕೊಲ್ಯಾಜ್ ತಯಾರಿಕೆ, ಮಾದರಿ ತಯಾರಿಕೆ, ಪಿಪಿಟಿ, ಚಿತ್ರಕಲೆ (ಪೆನ್ಸಿಲ್ ಸ್ಕೆಚ್), ಸ್ಮರಣ ಶಕ್ತಿ ಮುಂತಾದ ಸ್ಪರ್ಧೆಗಳನ್ನು ಮೂರು ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ಬೆಳಿಗ್ಗೆ 9ಕ್ಕೆ ಕಾಲೇಜುಗಳ ನೋಂದಣಿ ಆರಂಭವಾಗಲಿದ್ದು, 10 ಗಂಟೆಗೆ ಉದ್ಘಾಟನೆ ನಡೆಯಲಿದೆ’ ಎಂದು ಕಾಲೇಜಿನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಜನಪದ ಹಾಡು ಮತ್ತು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹3 ಸಾವಿರ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ₹2 ಸಾವಿರ ನಗದು ಬಹುಮಾನ ಹಾಗೂ ಉಳಿದ ಸ್ಪರ್ಧೆಗಳಿಗೆ ಪ್ರಥಮ ₹2 ಸಾವಿರ ಮತ್ತು ದ್ವಿತೀಯ ₹1 ಸಾವಿರ ನಗದು ಬಹುಮಾನ ನೀಡಲಾಗುವುದು. ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿದ ಹಾಗೂ ಬಹುಮಾನ ಪಡೆದ ಕಾಲೇಜುಗಳಿಗೆ ವಿಶೇಷ ಬಹುಮಾನ ವಿತರಿಸಲಾಗುವುದು. ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು’ ಎಂದರು.
‘ಉತ್ಸವದಲ್ಲಿ ತಿಂಡಿ–ತಿನಿಸು, ಆಭರಣ, ಗುಡಿ ಕೈಗಾರಿಕೆ ವಸ್ತುಗಳು, ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ಮಳಿಗೆಗಳು ಇರಲಿವೆ. ಈಗಾಗಲೇ 13 ಕಾಲೇಜುಗಳು ನೋಂದಣಿ ಮಾಡಿಕೊಂಡಿವೆ. ಮಾಹಿತಿಗೆ ಮೊ: 7892066227, 9538520716 ಸಂಪರ್ಕಿಸಬಹುದು’ ಎಂದು ಹೇಳಿದರು.
ಪ್ರೊ. ಡಾ.ಸಿದ್ಧೇಶ ಎಂ.ಬಿ. ಡಾ. ರತ್ನಮಾಲಾ ಕಡಪಟ್ಟಿ ಹಾಗೂ ಎಸ್.ಎನ್. ಎಮ್ಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.