ADVERTISEMENT

`ಉದ್ಯೋಗ ಖಾತ್ರಿಯಿಂದ ಗ್ರಾಮೀಣರ ಬದುಕು ಹಸನು'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 8:22 IST
Last Updated 4 ಸೆಪ್ಟೆಂಬರ್ 2013, 8:22 IST

ಗಜೇಂದ್ರಗಡ: ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಕ್ಕೆ ಮುಂದಾದರೆ ಗ್ರಾಮೀಣರ ಬದುಕು ಹಸನಾ ಗುವುದರಲ್ಲಿ ಸಂದೇಹವಿಲ್ಲ ಎಂದು ನ್ಯಾಯವಾದಿ ಫೈಯಾಜ ಅಹ್ಮದ ತೋಟದ ಅಭಿಪ್ರಾಯಪಟ್ಟರು.

ಡಿವೈಎಫ್‌ಐ ಸಂಘಟನೆ ನೂತನವಾಗಿ ಮಾಡಿಸಿದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿನ ನೂತನ ಜಾಬ್ ಕಾರ್ಡ್‌ಗಳನ್ನು ಸಮೀಪದ ಮಾಟರಂಗಿ ಗ್ರಾಮಸ್ಥರಿಗೆ ವಿತರಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಸರ್ಕಾರದ ಭರವಸೆಗಳು ದಾಖಲೆಗಳಿಗೆ ಮಾತ್ರ ಸಿಮೀತವಾಗಿವೆ. ಪರಿಣಾಮ ಯೋಜನೆಯಲ್ಲಿನ ಕಾನೂನು ಬದ್ಧತೆಗಳು ದಾಖಲೆಗಳಿಗೆ ಮಾತ್ರ ಸಿಮೀತವಾಗಿ ಉಳಿದುಕೊಂಡಿವೆ. ಹೀಗಾಗಿ ಗ್ರಾಮೀಣ ಪ್ರದೇಶ ಅಸಹಾಯಕರ, ಅಸಬಲರ ಬದುಕು ಹಸನುಗೊಳಿಸಬೇಕಿದ್ದ ಯೋಜನೆ ಹಳ್ಳ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳ್ಳದ ಪರಿಣಾಮ ಜೀವನೋಪಾಯದ ದಾರಿಗಳೇ ಇಲ್ಲದಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಹೈದ್ರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟದ ಜನತೆ ಬೆಂಗಳೂರಿಗೆ ಹೋಗುತ್ತಾರೆ. ಮತ್ತೆ ಕೆಲವರು ಮುಂಬೈ, ವಾಸ್ಕೊ, ಪಣಜಿಗೆ ಹೋಗುತ್ತಾರೆ.

ಅಸಮರ್ಪಕ ಮಳೆ ಹಂಚಿಕೆ ಸಮಸ್ಯೆ ಎದುರಿಸುತ್ತಿರುವ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಬರವೇ ಹೆಚ್ಚು. ಹೀಗಾಗಿ ಇಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಗೊಂಡರೆ ಗುಳೆ ಪ್ರಮಾಣವನ್ನು ತಪ್ಪಿಸಬಹುದಾಗಿದೆ. ಆದರೆ, ಯೋಜನೆ ಅನುಷ್ಠಾನ ಸಮರ್ಪಕ ರೀತಿಯಲ್ಲಿ ಆಗದಿರುವುದರಿಂದಲ್ಲೇ ಯೋಜನೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದರು.

ತಾಲ್ಲೂಕು ಮುಖಂಡ ಬಸವರಾಜ ಶೀಲವಂತರ, ಕರಿಯಮ್ಮ ಗುರಿಕಾರ, ಬಾಲು ರಾಠೋಡ್, ಬಸಮ್ಮ ಗುರಿಕಾರ, ಬಾಲಪ್ಪ ಹೂಗಾರ, ಆರ್.ಕೆ.ಗೋಡೆಕಾರ್, ಕಳಕೇಶ ಉಕ್ಕಿಸಲ, ರವಿ ಗುರಿಕಾರ, ಸುರೇಶಗೌಡ ಗೌಡರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.