ADVERTISEMENT

ಕೆರೆ ಕಟ್ಟೆ ಮಾಯ...ನೀರೂ ಮಾಯ...

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 9:45 IST
Last Updated 15 ಮಾರ್ಚ್ 2012, 9:45 IST
ಕೆರೆ ಕಟ್ಟೆ ಮಾಯ...ನೀರೂ ಮಾಯ...
ಕೆರೆ ಕಟ್ಟೆ ಮಾಯ...ನೀರೂ ಮಾಯ...   

ಲಕ್ಷ್ಮೇಶ್ವರ: ಒಂದು ಕಾಲದಲ್ಲಿ ಸಾವಿರಾರು ಜಾನುವಾರುಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರಿನ ಆಶ್ರಯ ತಾಣವಾಗಿದ್ದ  ಪಟ್ಟಣದ ಕೆರೆಗಳು ಬತ್ತಿ ಹೋಗಿವೆ. 

 ದಿನೇ ದಿನೇ ಬರಗಾಲ ಬಿಗಾಡಯಿಸುತ್ತಿದ್ದು, ಗುಟುಕು ನೀರಿಗಾಗಿ  ರೈತರ ಜಾನುವಾರು ಹಾಗೂ ಪಕ್ಷಿಗಳು ಬಾಯಿ ತೆರೆದು ಕುಂತಿವೆ.

ಪಾಳಾ-ಬದಾಮಿ ರಸ್ತೆಗೆ ಹೊಂದಿ ೊಂಡಿರುವ ಇಟ್ಟಿಗೆರೆ ಕೆರೆ, ಮುಕ್ತಿಮಂದಿರ ರಸ್ತೆಯಲ್ಲಿನ ಕೆಂಪಿಗೆರೆ ಕೆರೆ ಹಾಗೂ ದೊಡ್ಡೂರು ರಸ್ತೆಯಲ್ಲಿನ ಮೋಟಾರ್‌ಗಟ್ಟೆ ಕೆರೆ ಇವು ಪಟ್ಟಣದ ದೊಡ್ಡ ಕೆರೆಗಳು.

ಇವುಗಳಲ್ಲಿ ಇಟ್ಟಿಗೆರೆ ಕೆರೆ ಬಹಳ ವಿಶಾಲವಾಗಿದೆ. ಇದು ಮೊದಲು ಹದಿನೆಂಟು ಎಕರೆ ಇತ್ತು. ಒತ್ತುವರಿಯಾಗಿ ಉಳಿದಿರುವುದು ಬರೀ ಹನ್ನೆರೆಡು ಎಕೆರೆ ಮಾತ್ರ. 

ಎರಡ್ಮೂರು ದಶಕಗಳ ಹಿಂದೆ ಮಳೆಗಾಲದಲ್ಲಿ ಇಟ್ಟಿಗೆರೆ ಕೆರೆ ಮೈದುಂಬಿಕೊಂಡು ಅಂದವಾಗಿ ಕಾಣುತ್ತಿತ್ತು. ನಾಲ್ಕು ಕಿಮೀ ದೂರದ ರಾಮಗಿರಿ ಹಾಗೂ ಗೌಳಿ ಗುಡ್ಡದಿಂದ ಅಪಾರ ಪ್ರಮಾಣದ ನೀರು ಪೂಜಾರಿಯವರ ಹಳ್ಳದ ಮೂಲಕ ಹಾಯ್ದು ತಪಶೆಟ್ಟಿ ಫೂಲ್ ಮುಖಾಂತರ ಕೆರೆಗೆ ಬಂದು ಸೇರುತ್ತಿತ್ತು.

ಆ ಸಮಯದಲ್ಲಿ ಸಾವಿರಾರು ಜಾನು ವಾರುಗಳಿಗೆ ಕೆರೆಯ ನೀರು ಲಭ್ಯವಾಗುತ್ತಿತ್ತು.  ಮಹಿಳೆಯರು ನಿತ್ಯವೂ ಬಟ್ಟೆ ಒಗೆಯುತ್ತಿದ್ದರು. ಅಲ್ಲದೆ ಪ್ರತಿ ಅಮವಾಸ್ಯೆಯಂದು ಲಾರಿ, ಟ್ರ್ಯಾಕ್ಟರ್‌ಗಳನ್ನು ಇಲ್ಲಿಗೆ ತಂದು ತೊಳೆಯ ಲಾಗುತ್ತಿತ್ತು.

ಅಲ್ಲದೆ, ಪಟ್ಟಣದ ನೂರಾರು ಬಾಲಕರು ಇದೇ ಕೆರೆಯಲ್ಲಿ ಈಜು ಸಹ ಕಲಿಯುತಿದ್ದರು. `ನಾವ್ ಸಣ್ಣವರಿದ್ದಾಗ ಹೊಲಕ್ಕ ಹೊಂಟಾಗ ನಮ್ಮ ದನಕರಕ್ಕ ಇಟ್ಟಿಗೆರಿ ಕೆರಿ ನೀರ ಕುಡಸ್ತಿದ್ವಿ. ಆದ್ರ ಈಗ ಕೆರ‌್ಯಾಗ ಒಂದ್ ಹನಿ ನೀರಿಲ್ಲ. ಹಿಂಗಾಗಿ ದನಕರಕ್ಕ ನೀರ ಇಲ್ದಂಗ ಆಗೇತಿ~ ಎಂದು ರೈತರಾದ ಫಕ್ಕೀರಪ್ಪ ಉಮಚಗಿ, ಮಲ್ಲೇಶಪ್ಪ ಉಮಚಗಿ, ನೀಲಪ್ಪ ಶೆರಸೂರಿ, ಕರಿಬಸಪ್ಪ ಗುರಿಕಾರ ಮತ್ತಿತರರು ನೋವಿನಿಂದ ನುಡಿಯುತ್ತಾರೆ.

ಕಳೆದ ಒಂದು ದಶಕದಿಂದ ಪಟ್ಟಣ ಅತೀ ವೇಗದಲ್ಲಿ ಬೆಳೆಯುತ್ತಿದ್ದು ಮನೆಗಳ ನಿರ್ಮಾಣಕ್ಕಾಗಿ ಕೆರೆಗೆ ನೀರು ಬರುವ ಮಾರ್ಗವನ್ನೇ ಬದಲಾಯಿಸಲಾಗಿದೆ. ಹೀಗಾಗಿ ಹತ್ತು ವರ್ಷಗಳಿಂದ ಕೆರೆ ತುಂಬಿದ ಉದಾಹರಣೆ ಇಲ್ಲ.

ಇನ್ನು ಸ್ಥಳೀಯ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಾಗಿ ಕೆರೆ ದಂಡೆ ಮೇಲೆ ಅನಧಿಕೃತವಾದ ಹತ್ತಾರು ಗುಡಿಸಲುಗಳು ತಲೆ ಎತ್ತಿ ನಿಂತಿದ್ದವು. ಈ ಗುಡಿಸಲು ವಾಸಿಗಳಿಗೆ ಕೆರೆ ತುಂಬುವುದು ಬೇಡವಾಗಿತ್ತು. ಕೆರೆಗೆ ನೀರು ಬರದಂತೆ ನೋಡಿಕೊಳ್ಳುತ್ತಿದ್ದರು ಎಂಬ ಸತ್ಯ ಈಗ ಗುಟ್ಟಾಗಿ ಉಳಿದಿಲ್ಲ.

ಆದರೆ ಈಗಿನ ಪುರಸಭೆ ಆಡಳಿತ ಮಂಡಳಿ ಕೆರೆ ದಂಡೆ ಮೇಲಿನ ಅನಧಿಕೃತ ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾಗಿರುವುದು ಸಮಾಧಾನದ ಸಂಗತಿ. ಗುಡಿಸಲುಗಳನ್ನು ತೆರವು ಗೊಳಿಸುವುದರ ಜೊತೆಗೆ ಪುರಸಭೆ ಕೆರೆಗೆ ಕಾಯಕಲ್ಪಕ್ಕೆ ನೀಡುವ ನಿಟ್ಟಿನಲ್ಲಿ ಯೋಚಿಸ ಬೇಕಾಗಿರುವುದು  ಆದ್ಯ ಕರ್ತವ್ಯವಾಗಿದೆ.

ಮೊದಲು ಒತ್ತುವರಿ ಜಾಗವನ್ನು ವಶಪಡಿಸಿಕೊಂಡು ಸುತ್ತಲೂ ಕಲ್ಲಿನಿಂದ ಪಿಚ್ಚಿಂಗ್ ಮಾಡಬೇಕು. ನೀರು ಬರುವ ಮಾರ್ಗಗಳನ್ನು ಗುರುತಿಸಿ ಮತ್ತೆ ಸರಾಗವಾಗಿ ನೀರು ಬರುವ ವ್ಯವಸ್ಥೆ ಮಾಡಬೇಕು. ಅಲ್ಲದೆ ಬೇಸಿಗೆ ದಾಟುವವರೆಗೆ ಕೆರೆಗೆ ನೀರು ಬಿಡುವ ವ್ಯವಸ್ಥೆ ಮಾಡಿ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಬೇಕಾಗಿದೆ.

 ಇಲ್ಲವೇ ಮೂರ‌್ನಾಲ್ಕು ಸಿಮೆಂಟ್ ಡೋಣಿಗಳನ್ನು ನಿರ್ಮಿಸಿ ಕೆರೆಯಲ್ಲಿಯೇ ಹಾಯ್ದು ಹೋಗಿರುವ ಮೇವುಂಡಿ ಪೈಪ್‌ಲೈನ್‌ನಿಂದ ಅವುಗಳನ್ನು ತುಂಬಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪುರಸಭೆಗೆ ಕೆರೆ ರಕ್ಷಣೆಗಾಗಿ ಅಗತ್ಯ ಸೂಚನೆ ನೀಡುವ ಅವಶ್ಯಕತೆಯೂ ಇದೆ.

ಅಲ್ಲದೆ, ಕೆರೆ ಪಾತ್ರದಲ್ಲಿಯೇ ಇರುವ ಪುರಸಭೆಗೆ ಸಂಬಂಧಿಸಿದ ಬೋರ್‌ವೆಲ್‌ಗಳ ಮೂಲಕ ಕೆರೆಗೆ ನೀರು ಬಿಡುವಂತೆಯೂ ಮಾಡಲು ಅವಕಾಶ ಇದೆ. ಇಟ್ಟಿಗೆರೆಯಂತೆಯೇ ಇನ್ನೆರೆಡು ಪ್ರಮುಖ ಕೆರೆಗಳಾದ ಕೆಂಪಿಗೆರೆ ಹಾಗೂ ಮೋಟಾರ್‌ಗಟ್ಟಿ ಕೆರೆ ರಕ್ಷಣೆಗೂ ಜಿಲ್ಲಾಡಳಿತ ಪ್ರಯತ್ನಿಸುವ ಅಗತ್ಯ ಇದೆ.
ಇರುವ ಮೂರು ಕೆರೆಗಳನ್ನಾದರೂ ಉಳಿಸಿಕೊಳ್ಳಲು ಪುರಸಭೆ ಆಡಳಿತ ಮಂಡಳಿ ಯೋಚಿಸಬೇಕಾಗಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.