ADVERTISEMENT

ಗೊಜನೂರಿನ ಶಾಲೆ ಹಸಿರುಮಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 12:47 IST
Last Updated 5 ಜೂನ್ 2018, 12:47 IST

ಲಕ್ಷ್ಮೇಶ್ವರ: ‘ಹಸಿರೇ ಉಸಿರು, ಹಸಿರೇ ಬಾಳಿಗೆ ಆಧಾರ’ ಎಂಬ ಘೋಷ ವಾಕ್ಯದೊಂದಿಗೆ 2013ರಲ್ಲಿ ಶಾಲೆಯ ವಿಶಾಲವಾದ ಆವರಣದಲ್ಲಿ ತೋಟ ನಿರ್ಮಿಸಲು ಶಿಕ್ಷಕರು, ಸಿಬ್ಬಂದಿ ಪಣ ತೊಟ್ಟರು. ಸತತ ಪ್ರಯತ್ನದ ಫಲವಾಗಿ ಈಗ ಗೊಜನೂರಿನ ಸರ್ಕಾರಿ ಪ್ರೌಢ ಶಾಲೆ ಆವರಣವು ಹಚ್ಚ ಹಸಿರಾಗಿದೆ.

ಇಲ್ಲಿ ಸುಂದರ ‘ಪಂಚವಟಿ’ ಉದ್ಯಾನ ನಿರ್ಮಿಸಿ ಅಲ್ಲಿ ವಿವಿಧ ಪ್ರಕಾರದ ಔಷಧಿ, ಅಲಂಕಾರಿಕ, ಫಲಪುಷ್ಪ ಗಿಡಗಳು ಹಾಗೂ ಹುಲ್ಲುಹಾಸು ಬೆಳೆಸಲಾಗಿದೆ. ಸಿಮೆಂಟ್‌ನಿಂದ ತಯಾರಿಸಿದ ಪಕ್ಷಿ, ಪ್ರಾಣಿಗಳ ಕಲಾಕೃತಿಗಳು ಗಮನಸೆಳೆಯುತ್ತವೆ. ಎರೆಹುಳು ಗೊಬ್ಬರ ಘಟಕ, ಜೀವಸಾರ ಘಟಕ, ಜೀವಾಮೃತ, ಎರೆಜಲ, ಇಂಗುಗುಂಡಿ ನಿರ್ಮಿಸಲಾಗಿದೆ. ಇದರ ಹಿಂದೆ ಗ್ರಾಮ ಪಂಚ್ತಾಯಿ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕ ರವಿ ಬೆಂಚಳ್ಳಿ, ಶಿಕ್ಷಕರ, ಸಿಬ್ಬಂದಿ ವರ್ಗದ ಶ್ರಮವಿದೆ.

ಶಾಲಾ ಉದ್ಯಾನದಲ್ಲಿ ನೂರಕ್ಕೂ ಹೆಚ್ಚು ಗಿಡಗಳಿವೆ. ಬಿಲ್ವಪತ್ರೆ, ಬನ್ನಿ, ಬೇವು, ಅರಳಿ ಮತ್ತು ಅತ್ತಿ ಮರ ಬೆಳೆಸಲಾಗಿದೆ. ಜತೆಗೆ ತೇಗ, ತೆಂಗು, ಮಾವು, ಹುಣಸೆ, ಸಿಂಗಪುರ ಚರಿ, ಅಶೋಕ, ಅಕೇಶಿಯಾ, ಬಾದಾಮಿ, ಪ್ರೋಟಾನ್, ಕಾಡುನೆಲ್ಲಿ, ಚಿಕ್ಕು, ಲಿಂಬೆ, ಪೇರಲ, ಸೀತಾಫಲ, ಲೈಟ್ ಸ್ಟಾರ್, ಪೇಪರ್ ಪ್ಲಾವರ್, ಸುಬಾಬುಲ್, ಹೊಂಗೆ ಸೇರಿದಂತೆ ವಿವಿಧ ಬಗೆಯ ಅಲಂಕಾರಿಕ ಸಸಿಗಳು ಗಮನಸೆಳೆಯುತ್ತವೆ. ಶಾಲಾ ಆವರಣ ಹುಲ್ಲುಹಾಸಿನಿಂದ ಕಂಗೊಳಿಸುತ್ತಿದೆ.

ADVERTISEMENT

ಅತ್ಯುತ್ತಮ ಕಲಿಕಾ ವಾತಾವರಣ ನಿರ್ಮಾಣ ಪ್ರಶಸ್ತಿ, ಪರಿಸರ ಮಿತ್ರ ಶಾಲೆ ಪ್ರಶಸ್ತಿ, ಆರ್‌ಟಿಇ ಕಾರ್ಯಪಡೆ ನೀಡುವ ಅತ್ಯುತ್ತಮ ಮಕ್ಕಳ ಸ್ನೇಹಿ ಶಾಲೆ ಪ್ರಶಸ್ತಿ, ಸ್ವಚ್ಛ ವಿದ್ಯಾಲಯ ಪುರಸ್ಕಾರ, ಜಿಲ್ಲಾ ಮಾದರಿ ಶಾಲೆ ವಿಶೇಷ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಶಾಲೆಗೆ ಲಭಿಸಿದೆ.

‘ನಮ್ಮೂರಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಶಿಕ್ಷಕರು ಸುಂದರ ಉದ್ಯಾನ ನಿರ್ಮಿಸಿರುವುದರಿಂದ ನಮ್ಮೂರಿನ ಕೀರ್ತಿ ಹೆಚ್ಚಾಗಿದೆ’ ಎಂದು ಗ್ರಾಮದ ನಿವಾಸಿ, ಲಕ್ಷ್ಮೇಶ್ವರ ಎಪಿಎಂಸಿ ಅಧ್ಯಕ್ಷ ಎಸ್‌.ಪಿ.ಪಾಟೀಲ ಸಂತಸ ವ್ಯಕ್ತಪಡಿಸಿದರು.

‘ಉದ್ಯಾನ ನಿರ್ಮಾಣಕ್ಕಾಗಿ ನಮ್ಮ ಶಿಕ್ಷಕರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಗ್ರಾಮದ ಪ್ರತಿಯೊಬ್ಬರ ಸಹಕಾರದಿಂದ ಶಾಲೆ ಹಸಿರುಮಯವಾಗಿದೆ’ ಎಂದು ಮುಖ್ಯಶಿಕ್ಷಕ ರವಿ ಬೆಂಚಳ್ಳಿ ಹೇಳಿದರು.

ನಾಗರಾಜ ಎಸ್‌. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.