ಮುಳಗುಂದ: ಗ್ರಾಮೀಣ ಜನತೆಯ ಬದುಕಿನಲ್ಲಿ ಹಾಸುಹೂಕ್ಕಾಗಿರುವ ಜನಪದ ಸೊಗಡು ಜೀವನದ ಪ್ರತಿಬಿಂಬವಾಗಿದೆ ಎಂದು ಉಪನ್ಯಾಸಕ ಎಸ್.ಬಿ. ಗಾವರವಾಡ ತಿಳಿಸಿದರು.
ಸಮೀಪದ ಯಲಿಶಿರೂರ ಗ್ರಾಮದಲ್ಲಿ ಸ್ಥಳೀಯ ಕೆಎಸ್ಎಸ್ ಪದವಿ ಮಹಾವಿದ್ಯಾಲಯ ಹಮ್ಮಿಕೊಂಡಿರುವ ಎನ್ಎಸ್ಎಸ್ ವಿಶೇಷ ಶಿಬಿರದಲ್ಲಿ `ಗ್ರಾಮೀಣ ಜನತೆ ಹಾಗೂ ಪವಾಡ ರಹಸ್ಯ ಬಯಲು~ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.
ಗ್ರಾಮೀಣ ಮಹಿಳೆಯರು ತಮ್ಮ ಆಸಕ್ತಿಯನ್ನು ನುಡಿಕಟ್ಟಿ ಹಾಡುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಜನನ, ಮರಣ ಹಾಗೂ ಮಕ್ಕಳ ಲಾಲನೆ, ಪಾಲನೆಗೆ ಸಂಬಂಧಿಸಿದ ಜನಪದ ಸೇರಿದಂತೆ ಸೂಬಾನ ಪದ, ಗರತಿಯರ ಹಾಡು, ಶರಣರ ನೀತಿ ತತ್ವಾಧಾರಿತ ಹಾಡುಗಳನ್ನು ಕಟ್ಟಿ ಆ ಮೂಲಕ ಬದುಕಿನ ರಸಗಳಿಗೆಗಳನ್ನು ಅನುಭವಿಸುತ್ತಿದ್ದಾರೆ.
ಉಪನ್ಯಾಸಕ ಜಿ.ಸಿ. ಜಂಪನ್ನವರ `ಪವಾಡ ರಹಸ್ಯ ಬಯಲು~ ಪ್ರದರ್ಶಿಸುವ ಮೂಲಕ ಜನರಲ್ಲಿ ತಪ್ಪು ಗ್ರಹಿಕೆಗಳನ್ನು ದೂರಗೊಳಿಸಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೂಢನಂಭಿಕೆಗಳಿಗೆ ಮಾರುಹೋಗುವ ಜನರಿಗೆ ಎಚ್ಚರಿಕೆ ಮಾತುಗಳನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಸದಸ್ಯ ಷಣ್ಮಖಪ್ಪ ಎಲಿ ಮಾತನಾಡಿ ಎನ್ಎಸ್ಎಸ್ ಗ್ರಾಮೀಣ ಜನರಿಗೆ ತಿಳುವಳಿಕೆ ನೀಡುವ ಉತ್ತಮ ವೇದಿಕೆಯಾಗಿದೆ. ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರು ಸ್ವಚ್ಚತೆಯ ಪರಿಕಲ್ಪನೆಯನ್ನು ಹೊಂದುವುದು ಅಗತ್ಯವಿದೆ ಎಂದರು.
ಎಸ್.ಬಿ. ಬಂಡಿವಡ್ಡರ ಹಾಗೂ ಸಂಗಡಿಗರು ಎನ್ಎಸ್ಎಸ್ ಗೀತೆ ಹಾಡಿದರು. ಎನ್ಎಸ್ಎಸ್ ಯೋಜನಾಧಿಕಾರಿ ಎಂ.ಆರ್. ಜರಕುಂಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕೆ.ಎಚ್. ಶಿವಾನಂದ ನಿರೂಪಿಸಿದರು. ಎಸ್.ಎ. ಯಳವತ್ತಿ ವಂದಿಸಿದರು. ನಂತರ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.