ADVERTISEMENT

ಡಾ.ಗಿರಡ್ಡಿ ಬದುಕು ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:42 IST
Last Updated 21 ಮೇ 2018, 12:42 IST

ಗಜೇಂದ್ರಗಡ: ‘ಕನ್ನಡ ಸಾಹಿತ್ಯದ ಹೊಸ ತಲೆಮಾರಿನ ಶ್ರೇಷ್ಠ ವಿಮರ್ಶಕರಾಗಿದ್ದ ಡಾ.ಗಿರಡ್ಡಿ ಗೋವಿಂದರಾಜ ಸೃಜನಶೀಲ ಸಾಹಿತ್ಯ ಹಾಗೂ ವಿಮರ್ಶೆ ಎರಡರಲ್ಲೂ ಖ್ಯಾತರಾಗಿದ್ದರು. ಅವರ ಅಕಾಲಿಕ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಶಿಕ್ಷಕ ಎ.ಎನ್.ರೋಣದ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ಶನಿವಾರ ನಡೆದ ವಾರದ ಸಾಹಿತ್ಯ ಚಿಂತನಗೋಷ್ಠಿಯಲ್ಲಿ ‘ಡಾ.ಗಿರಡ್ಡಿ ಗೋವಿಂದರಾಜರ ಬದುಕು ಬರಹ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ತಮ್ಮ ಜೀವಿತಾವಧಿಯಲ್ಲಿ ಹಲವು ಕಾವ್ಯ, ಸಾಹಿತ್ಯ ವಿಮರ್ಶೆ, ಕಥಾಸಂಕಲನ ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಬದುಕು ಅನುಕರಣೀಯ’ ಎಂದರು.

ADVERTISEMENT

ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ಐ.ಎ.ರೇವಡಿ ಮಾತನಾಡಿ, ‘ಡಾ.ಗಿರಡ್ಡಿ ಗೋವಿಂದರಾಜರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಸಾಹಿತ್ಯ ಸಂಪಾದನೆ, ನಾಟಕಗಳ ನಿರ್ದೇಶನ, ಅವರ ವಿಮರ್ಶೆಯಲ್ಲಿ ಅಪಾರ ಜ್ಞಾನ ಭಂಡಾರವಿರುತ್ತಿತ್ತು. ಈ ನಿಟ್ಟಿನಲ್ಲಿ ಅವರ ಸಾಹಿತ್ಯ ಸಂಪುಟ ರಚನೆಯಾಗಬೇಕು’ ಎಂದರು.

ಈ ವೇಳೆ ಪಿ.ಎಸ್.ಹಿರೇಮಠ, ವೈ.ಎಚ್.ಪೂಜಾರ, ಎ.ಕೆ.ಒಂಟಿ, ಎಸ್.ಎಸ್.ನರೇಗಲ್, ಶಂಕರ ಕಲ್ಲಿಗನೂರ, ಹುಚ್ಚಪ್ಪ ಹಾವೇರಿ, ಎಂ.ಎಸ್.ಮಕಾನದಾರ್, ಎಸ್.ಎ.ಜಿಗಳೂರ, ಕೆ.ಎಸ್.ಗಾರವಾಡ ಹಿರೇಮಠ, ಎಸ್.ಕೆ.ಕಟ್ಟಿಮನಿ, ಬಿ.ವಿ.ಮುನವಳ್ಳಿ, ಎಂ.ಕೆ.ಕೆಸೂರ, ಚೇತನಾ ವಿಶ್ವಬ್ರಾಹ್ಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.