ADVERTISEMENT

ಪುರಸಭೆ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 10:05 IST
Last Updated 18 ಅಕ್ಟೋಬರ್ 2012, 10:05 IST

ಮುಂಡರಗಿ: `ಊರೆಲ್ಲ ಹೊಲಸೆದ್ದು ನಾರಾಕತೈತಿ, ಓಟ ಹಾಕಿ ಕಳಿಸಿದ್ವರು ಕಂಡಲೆಲ್ಲ ಛಿ! ಥೊ! ಅನ್ನಾಕತ್ಯಾರ. ಅದಕ್ಕ ಎಲ್ಲ ವಾರ್ಡ್ ಮೆಂಬರ್ ಕೈಯಾಗ ಸಲಕಿ, ಗುದ್ಲಿ. ಕಸಬರಿಗಿ ಕೊಟ್ಟಬಿಡ್ರಿ ನಾವ ಹೋಗಿ ಊರೆಲ್ಲ ಸ್ವಚ್ಛ ಮಾಡಿ ಬರ‌್ತೆವಿ~ ಎಂದು ಪುರಸಭೆ ಸದಸ್ಯೆ ನಿರ್ಮಲಾ ಅಳವುಂಡಿಮಠ ಖಾರವಾಗಿ ಪ್ರಶ್ನಿಸಿದರು. 

  ಸ್ಥಳೀಯ ಪುರಸಭೆಯಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, `ಉರಾಗಿರೊ ಗಟಾರೆಲ್ಲ ತುಂಬಿ ಹೊಲಸ ನೀರು ಮನಿ ಮುಂದ ಮತ್ತ ರೋಡ್‌ನ್ಯಾಗ ಹರಿ ಯಾಕ ಹತೈತಿ. ಒಬ್ಬರಾದರೂ ಊರಾಗ ಬರಲಿಲ್ಲ ನೋಡಲಿಲ್ಲಾ. ಹಿಂಗಾದ್ರ ನಾವ್ ಜನಕ್ಕ ಏನ ಹೇಳೊಣ?~ ಎಂದು ಪುರಸಭೆ ಮುಖ್ಯಾಧಿ ಕಾರಿಯನ್ನು ತರಾಟೆಗೆ ತೆಗೆದುಕೊಂಡರು.

  ಪಟ್ಟಣದಲ್ಲಿ ಒಂದು ಸುಸಜ್ಜಿತ ಶಾದಿ ಮಹಲ್ ನಿರ್ಮಿಸಬೇಕೆಂದು ಕಳೆದ  ಸಾಮಾನ್ಯ ಸಭೆಗಳಲ್ಲಿ ಠರಾವು ತಗೆದುಕೊಂಡಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ವಿನಾಕಾರಣ ಕಾಲ ಹರಣ ಮಾಡುತ್ತಿರುವ ಉದ್ದೇಶವಾದರೂ ಏನು? ಎಂದು ಸದಸ್ಯೆ ರಿಹಾನಾಬೇಗಂ ಕೆಲೂರ ಪ್ರಶ್ನಿಸಿದರು. ಶಾದಿ ಮಹಲ್ ನಿರ್ಮಿಸುವ ಕುರಿತಂತೆ ನಿಖರವಾದ ಕ್ರಮ ಕೈಗೊಳ್ಳದಿರುವ ಕ್ರಮವನ್ನು ಖಂಡಿಸಿ ಅವರು ಮುಖ್ಯಾಧಿಕಾರಿ ಎದುರು ನೆಲದ ಮೇಲೆ ಕುಳಿತು ಕೆಲಕಾಲ ಪ್ರತಿಭಟನೆ ನಡೆಸಿದರು.

 ಮುಖ್ಯಾಧಿಕಾರಿಗಳು ಕಾಟಾಚಾರಕ್ಕೆ ಸದಸ್ಯರ ಸಭೆಯನ್ನು ಕರೆಯಬಾರದು. ಪ್ರತಿ ಸಾರಿ ಜರುಗುವ ಸಾಮಾನ್ಯ ಸಭೆಗಳಲ್ಲಿ ಪಟ್ಟಣದ ಅಭಿವೃದ್ಧಿ ಕುರಿತಂತೆ ಹಲವು ನಿರ್ಣಯಗಳನ್ನು ಕೈಗೊಳ್ಳ ಲಾಗುತ್ತದೆ. ಆದರೆ ಸಭೆಯಲ್ಲಿ ಕೈಗೊಂಡ ಯಾವ ಕಾರ್ಯಕ್ರಮಗಳು ಪೂರ್ಣಗೊಳ್ಳುವುದಿಲ್ಲ ಮತ್ತು ಕಾರ್ಯ ರೂಪಕ್ಕೆ ಬರುವುದಿಲ್ಲ ಎಂದು ಸದಸ್ಯ ಮೋದಿನಸಾಬ್ ಡಂಬಳ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.