ರೋಣ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಜಿಲ್ಲೆಯ ರೈತರಿಗೆ ಕೃಷಿ ವಿಮಾ ಯೋಜನೆ ಜಾರಿಯಲ್ಲಿ ಇದೆ. ಆದರೆ, ವಿಮಾ ಕ್ರಮ ಅವೈಜ್ಞಾನಿಕವಾಗಿದೆ ಎಂದು ತಾಲ್ಲೂಕಿನ ರೈತರು ದೂರಿದ್ದಾರೆ.
ಏನೀದು ಬೆಳೆ ವಿಮೆ:
2011-12 ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯ ವಿವಿಧ ಹೋಬಳಿ ಮಟ್ಟದಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯದ ರೈತರಿಗೆ ಅರ್ಜಿ ಸಲ್ಲಿಸಲು ಇದೇ ಡಿ.31 ಇಂದು ಕೊನೆಯ ದಿನವಾಗಿತ್ತು. ಅದರ ಪ್ರಕಾರವಾಗಿ ಹಿಂಗಾರು ಹಂಗಾಮಿನ ರೈತರಿಗೆ ಬೆಳೆ ವಿಮಾ ತುಂಬಲು ಆದೇಶ ನೀಡಲಾಗಿತ್ತು.
ಬೆಳೆಗಳು ಯಾವವು
ರೋಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ಬೇಸಿಗೆ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ ಬೆಳೆಗಳು ವಿಮಾ ಯೋಜನೆ ವ್ಯಾಪ್ತಿಗೆ ಬರಲಿವೆ.
ಬೆಳೆ ವಿಮೆಯ ಬಗ್ಗೆ ಆದೇಶ
ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿದ ಇಲ್ಲವೆ ನಾಟಿ ಮಾಡಿದ 30 ದಿನಗಳೊಳಗೆ ಮಾತ್ರ ವಿಮಾ ಕಂತು ಕಟ್ಟಿ ಅರ್ಜಿ ಸಲ್ಲಿಸಬೇಕು. ನೊಂದಾಯಿಸುವ ಸಮಯದಲ್ಲಿ ಬೆಳೆ ಆರೋಗ್ಯವಾಗಿರಬೇಕು. ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ನಿಗದಿಪಡಿಸಿದ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.
ಬ್ಯಾಂಕ ಅಧಿಕಾರಿಗಳ ಕಿರಿಕಿರಿ
ಬ್ಯಾಂಕ್ನ ಅಧಿಕಾರಿಗಳು ವಿಮೆಯ ಹಣವನ್ನು ತುಂಬಿಸಿಕೊಳ್ಳುತ್ತಿಲ್ಲ. ಕಾರಣ ಕೇಳಿದರೆ, ಬೆಳೆಯು 30 ದಿನದೊಳಗೆ ಇರಬೇಕು ಎನ್ನುತ್ತಾರೆ. ಇದರಿಂದ ವಿಮೆ ಸಿಗುತ್ತದೆ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಅವೈಜ್ಞಾನಿ ಕ್ರಮ
ರೈತರ ಹಿಂಗಾಮು ಹಂಗಾಮಿನ ಬೆಳೆ ವಿಮಾ ತುಂಬಲು ಈ ಮೊದಲೇ ಸರಕಾರವು ಆದೇಶಿಸಬೇಕಾಗಿತ್ತು. ಸರಕಾರ ರೈತರಪರವಾಗಿ ಯೋಚನೆ ಮಾಡದೇ ಕೇವಲ ಇನ್ಸೂರೆನ್ಸ್ ಕಂಪನಿಗಳ ಪರವಾಗಿ ಕೆಲಸ ಮಾಡಿದೆ ಎಂದು ಗದಗ ಜಿ.ಪಂ. ಮಾಜಿ ಅಧ್ಯಕ್ಷ ರೋಣ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಎನ್.ಎಸ್.ಕೆಂಗಾರ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ. .
ಅಧಿಕಾರಿಗಳ ಅಭಿಪ್ರಾಯ
ಬಿತ್ತನೆ ಮಾಡಿದ್ದನ್ನು ನಾವು ಅಧಿಕೃತವಾಗಿ ದಿನಾಂಕವನ್ನು ನಮೂದಿಸಿದ್ದೇವೆ. ಈಗ ತಿಂಗಳಿಗೂ ಹೆಚ್ಚು ಅವಧಿಗೂ ಆಗಿದೆ. ದಿನಾಂಕ ವಿಸ್ತರಿಸಲು ಸಾಧ್ಯವಿಲ್ಲ. ಇದಕ್ಕೆ ನಾವು ಜವಾಬ್ದಾರಿಯಲ್ಲ ಎನ್ನುತ್ತಾರೆ ಅಧಿಕಾರಿಗಳು.
ಒತ್ತಾಯ
ಸರ್ಕಾರ ಶೀಘ್ರವೇ ಈಗ ತಂದಿರುವ ಈ ಯೋಜನೆಯನ್ನು ಜನವರಿ ಕೊನೆಯ ವಾರದವರೆಗೂ ವಿಸ್ತರಿಸಬೇಕು ಮನವಿ ಮಾಡಿದ್ದಾರೆ. ಇದರಿಂದ ರೈತರಿಗೆ ಅನುಕೂಲ ವಾಗಲಿದೆ ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.