ADVERTISEMENT

ಭಾರತ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 9:35 IST
Last Updated 7 ಅಕ್ಟೋಬರ್ 2011, 9:35 IST

ಗಜೇಂದ್ರಗಡ: ಇತ್ತೀಚೆಗೆ ಪಟ್ಟಣಕ್ಕೆ ಆಗಮಿಸಿದ ಭ್ರಷ್ಟಾಚಾರ ಮುಕ್ತ ಭಾರತ ಸಂಕಲ್ಪಯಾತ್ರೆಯನ್ನು ಇಲ್ಲಿನ ಎ.ಬಿ.ವಿ.ಪಿ. ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.

ಸ್ಥಳೀಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಉಪಮಾರುಕಟ್ಟೆಯಲ್ಲಿನ ಶ್ರೀ ಗಜಾನನ ಮಂದಿರದಿಂದ ಆರಂಭಗೊಂಡ ಯಾತ್ರೆಯು ಕಾಲಕಾಲೇಶ್ವರವೃತ್ತ, ಜೋಡು ರಸ್ತೆ, ದುರ್ಗಾವೃತ್ತ, ಬಸವೇಶ್ವರ ವೃತ್ತದ ಮೂಲಕ ಹಾಯ್ದು ಎಸ್.ಎಂ.ಭೂಮರಡ್ಡಿ ಕಾಲೇಜಿನ ಆವರಣ ಪ್ರವೇಶಿಸಿತು. ನಂತರ ಅಲ್ಲಿ ಬಹಿರಂಗ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಪುರಸಭೆ ಸದಸ್ಯ ತಿಮ್ಮಣ್ಣ ವನ್ನಾಲ, ಬಡ ಮತ್ತು ಮಧ್ಯಮ ವರ್ಗದ ಹಿತ ರಕ್ಷಣೆ ಮಾಡಬೇಕಿದ್ದ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ದೇಶದ ಯುವಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಯುವಜನರು ಒಗ್ಗೂಡಿಕೊಂಡು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕಿದೆ ಎಂದರು.

2ಜಿ, ಕಾಮನ್‌ವೆಲ್ತ ಸೇರಿದಂತೆ ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲ ರಾಜಕಾರಣಿ ಮತ್ತು ಅಧಿಕಾರಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ ಅವರು, ಅಭಿವೃದ್ಧಿಯ ನೆಪದಲ್ಲಿ ರೈತರ ಕೃಷಿ ಯೋಗ್ಯ ಭೂಮಿಯನ್ನು ಕಿತ್ತುಕೊಳ್ಳುವ ಸರ್ಕಾರದ ವಿರುದ್ಧ ಜಾಗೃತವಾಗಬೇಕೆಂದು ಅವರು ಹೇಳಿದರು.

ಎ.ಬಿ.ವಿ.ಪಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಬಿ ನದಾಫ ಮಾತನಾಡಿ, ವಿದೇಶಿ ಬ್ಯಾಂಕುಗಳಲ್ಲಿರುವ ಭಾರತದ ಕಪ್ಪು ಹಣವನ್ನು ಕೇಂದ್ರ ಸರ್ಕಾರವು ದೇಶಕ್ಕೆ ವಾಪಸ್ ತರಿಸಿಕೊಂಡು ಆ ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿಬೇಕು. ಭ್ರಷ್ಟಾಚಾರಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಬಲ ಲೋಕಪಾಲ ಮಸೂದೆಯನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.

ಅಂಬರೀಶ ಅರಳಿ, ಗೋಪಾಲ ಲಾಳಿ, ವಿರೇಶ ಬಳಿಗೇರ, ಹನುಮಂತರಾಯ ಚವ್ಹಾಣ, ಪುಷ್ಪಾವತಿ ಭಾಂಡಗೆ, ಮಹಾಂತೇಶ ಶಿಗರಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.