ADVERTISEMENT

ಮದುವೆಯಲ್ಲಿ ಮತದಾನ ಜಾಗೃತಿ

ಮತದಾನದ ಮಹತ್ವ ಸಾರುವ ಫಲಕ ಹಿಡಿದು ಸಪ್ತಪದಿ ತುಳಿದ ಜೋಡಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 11:03 IST
Last Updated 29 ಏಪ್ರಿಲ್ 2018, 11:03 IST

ಗದಗ: ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ವಿವಾಹ ಸಮಾರಂಭ, ಮತದಾನ ಜಾಗೃತಿ ಕಾರ್ಯಕ್ರಮದ ವೇದಿಕೆಯಾಯಿತು. ‘ಮತ ಅಮೂಲ್ಯವಾದದು, ಮೇ 12ರಂದು ತಪ್ಪದೇ ಮತದಾನ ಮಾಡಿ’, ‘ನೋಟಿಗೆ ವೋಟ್‌ ಮಾರಿಕೊಳ್ಳದಿರಿ’, ‘ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ’ ಹೀಗೆ ಮತದಾನದ ಮಹತ್ವ ಸಾರುವ ಸಂದೇಶಗಳನ್ನು ಹಿಡಿದು ಮುಕುಂದ ಮತ್ತು ಸಂಗೀತಾ ಜೋಡಿ ಸಪ್ತಪದಿ ತುಳಿಯಿತು.

ಕುಶಿ ಪರಿವಾರದ ಸದಸ್ಯರು ಅವರಿಗೆ ಜತೆಯಾದರು. ಮದುವೆ ಸಮಾರಂಭಕ್ಕೆ ಬಂದವರು, ವಧು-ವರರಿಗೆ ಶುಭಾಶಯ ಹೇಳಲು ವೇದಿಕೆ ಏರಿದಾಗಲೂ ಮತದಾನದ ಮಹತ್ವ ಸಾರುವ ಘೋಷಣಾ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದರು. ಸಂದೇಶ ಹಿಡಿದು ಕ್ಯಾಮೆರಾಗೆ ಫೋಸ್ ನೀಡಿದರು. ಮದುವೆಗೆ ಬಂದ ಎಲ್ಲರಿಗೂ ಈ ಸಂದೇಶ ಪತ್ರಗಳನ್ನು ಹಂಚಿ, ಕಡ್ಡಾಯವಾಗಿ ಮತದಾನ ಮಾಡಿ ಎಂದು ಮನವೊಲಿಕೆ ಮಾಡಲಾಯಿತು.

‘ಈ ವಿವಾಹಕ್ಕೆ ಆಮಂತ್ರಣ ನನಗೂ ಬಂದಿತ್ತು. ಈ ಸಮಾರಂಭದಲ್ಲಿ ಮತದಾರರ ಜಾಗೃತಿಗಾಗಿ ಕಾರ್ಯಕ್ರಮವನ್ನೂ ಯಾಕೆ ಹಮ್ಮಿಕೊಳ್ಳಬಾರದು ಎಂಬ ಯೋಚನೆ ಬಂತು. ವಧು–ವರ ಮತ್ತು ಅವರ ತಂದೆ ತಾಯಿಗಳ ಮನವೊಲಿಸಿದೆವು. ಎಲ್ಲರೂ ಒಪ್ಪಿಕೊಂಡರು. ಹೀಗೆ ವಿವಾಹವೆಂಬ ಪವಿತ್ರ ಕಾರ್ಯದಲ್ಲಿ, ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಕಾರ್ಯವಾದ ಮತದಾನದ ಮಹತ್ವ ಸಾರಲಾಯಿತು. 1 ಸಾವಿರಕ್ಕೂ ಹೆಚ್ಚು ಜನರು ಇದಕ್ಕೆ ಸಾಕ್ಷಿಯಾದರು’ ಎಂದು ಅಂಗವಿಕಲ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸುವಂತೆ ಮಾಡಲು ಚುನಾವಣಾ ಆಯೋಗ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಜತೆಗೆ ಈ ಮತದಾನದ ಮಹತ್ವ ಸಾರಬೇಕು’ ಎಂದು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಅಂಗವಿಕಲ ನೌಕರರ ಸಂಘದ ರಾಜ್ಯ ಘಟಕದ ಖಜಾಂಚಿ ಮಂಜುನಾಥ ಹಿಂಡಿಹುಳಿ, ಸಿದ್ಧಲಿಂಗೇಶ ಕುಶಿ, ಬಸವರಾಜ ಕುಶಿ, ಸಂಗಪ್ಪ ಪಟ್ಟಣಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.