ಶಿರಹಟ್ಟಿ: ಗ್ರಾಮದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ಮದ್ಯದ ಅಂಗಡಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಗ್ರಾಮದಲ್ಲಿರುವ ಮದ್ಯದ ಅಂಗಡಿಯಿಂದ ಕುಡುಕರ ಹಾವಳಿ ವಿಪರೀತವಾಗಿದ್ದು, ಗ್ರಾಮದಲ್ಲಿ ಅಶಾಂತಿ ನಿರ್ಮಾಣವಾಗಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಚಿಂತನೆ ನಡೆಸಿರುವ ಈ ಸಂದರ್ಭದಲ್ಲಿ, ಈದೀಗ ಮತ್ತೊಂದು ಅಂಗಡಿ ಪ್ರಾರಂಭವಾಗುತ್ತಿರುವುದು ಕಲುಷಿತ ವಾತಾವರಣಕ್ಕೆ ಮತ್ತಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ದೂರಿದರು.
ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಈ ಕುರಿತು ಗ್ರಾಮದಲ್ಲಿ ಪ್ರಾರಂಭವಾಗುವ ನೂತನ ಮದ್ಯದಂಗಡಿಗೆ ಪರವಾನಗಿ ನೀಡಬಾರದೆಂದು ಮನವಿ ಸಲ್ಲಿಸಿದ್ದಾರೆ. ಆದರೂ ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಾಗಿ ಅಂಗಡಿ ತೆರೆಯಲು ಪ್ರಾರಂಭಿಸಿರುವುದು ಖಂಡನೀಯ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮೇಲಾಧಿಕಾರಿಗಳು ಈ ಎಲ್ಲ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜೇಸಾಬ ಕೋಟಿಹಾಳ, ನಾಗಪ್ಪ ಕೊಣ್ಣೊರ, ಮಕ್ತೂಮ ರಾಹುತ, ಚಂದ್ರು ಈಟಿ, ಫಕೀರೇಶ ತಳವಾರ, ಪ್ರಭುಗೌಡ ಹಿರೇಗೌಡರ, ಫಕೀರೇಶ ಈಳಿಗೇರ, ರಾಜೇಸಾಬ ತಾಡಪತ್ರಿ, ಮಾಬುಸಾಬ ಎಲಿಗಾರ, ತಿರಕನಗೌಡ ಪಾಟೀಲ, ಮಲ್ಲಪ್ಪ ಹರಿಜನ, ದಾವಲಸಾಬ ಕೋಟಿಹಾಳ, ಮಂಜುನಾಥ ಕುಸಗೂರ, ವೆಂಕಪ್ಪ ಶಿರಹಟ್ಟಿ, ನೀಲವ್ವ ತಿಪ್ಪಾಪೂರ, ಯಲ್ಲವ್ವ ಕಟ್ಟಿಮನಿ, ರೆಹಮಾನಬಿ ಕೋಟಿಹಾಳ, ಬಸವ್ವ ದೊಡ್ಡಮನಿ, ಹನುಮವ್ವ ಹಾವೇರಿ ಮತ್ತಿತರರು ಮನವಿಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.