ಗದಗ: ನೀರು ಮನುಷ್ಯನಿಗೆ ಅತ್ಯಮೂ ಲ್ಯವಾಗಿದೆ. ನೀರನ್ನು ಮಿತವ್ಯಯವಾಗಿ ಬಳಕೆ ಮಾಡಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸ್ಥಳೀಯ ಎಸ್.ಎಂ. ಕೃಷ್ಣ ಆಶ್ರಯ ಕಾಲೊನಿಯಲ್ಲಿ ಬುಧವಾರ ನೂತನ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಆಶ್ರಯ ಕಾಲೊನಿಯಲ್ಲಿರುವ ಬಡವರು ಹಾಗೂ ಎಲ್ಲ ಸಮಾಜ ಬಾಂಧವರು ಈ ಶುದ್ಧ ಕುಡಿಯುವ ನೀರು ಘಟಕದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗದಗ ತಾಲ್ಲೂಕಿನ ಜನರಿಗೆ 3-4ಲಕ್ಷ ಲೀಟರ್ ಕುಡಿಯುವ ನೀರಿನ ಅಗತ್ಯವಿದೆ. ಅದರಲ್ಲಿ ಈಗಾಗಲೇ ಗದಗ ನಗರದಲ್ಲಿ ನಾಲ್ಕು ಕಡೆ, ಹುಲಕೋಟಿ, ಬಿಂಕದಕಟ್ಟಿ, ಅಸುಂಡಿ ಸೇರಿದಂತೆ ಇತರೆಡೆ ಕೆ.ಎಚ್. ಪಾಟೀಲ ಪ್ರತಿಷ್ಠಾನ ಹಾಗೂ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ.
ಇದರಿಂದ 2.50ಲಕ್ಷ ಲೀಟರ್ ನೀರಿನ ಪೂರೈಕೆ ಮಾಡಲಾಗಿದೆ. ಬೆಳಧಡಿ, ಚಿಂಚಲಿ ಸೇರಿದಂತೆ ಇತರ ಕಡೆಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆಗೆ ಕಾರ್ಯ ನಡೆದಿದೆ ಎಂದು ಹೇಳಿದರು. |
ರಮ್ಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ಅವರು, ಹಬ್ಬದ ದಿನವೇ ಶುದ್ಧ ಕುಡಿಯುವ ನೀರಿನ ಉದ್ಘಾಟನೆ ಆಗಿರುವುದು ಸಂತಸ ತಂದಿದೆ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ಅನಿಲ ಗರಗ, ಜ್ಯೋತಿ ಇರಾಳ, ಅಕ್ಕಿ, ಗುರಣ್ಣ ಬಳಗಾನೂರ, ಉಮರ್ಫರೂಕ್ ಹುಬ್ಬಳ್ಳಿ, ಅಕ್ಬರ್ಸಾಬ್ ಬಬರ್ಚಿ, ಎಂ.ಜಿ. ಶೇಖ್, ಅಶೋಕ ಮಂದಾಲಿ, ಜಮಾದಾರ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.