ADVERTISEMENT

ಮೊಬೈಲ್ ಟವರ್ ಸ್ಥಳಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 8:30 IST
Last Updated 11 ಅಕ್ಟೋಬರ್ 2012, 8:30 IST

ಮುಂಡರಗಿ: ಜನ ವಸತಿ ಪ್ರದೇಶದಲ್ಲಿ ಸ್ಥಾಪಿಸಿರುವ ಬೃಹತ್ ಅವಳಿ ಮೊಬೈಲ್ ಟವರ್‌ಗಳನ್ನು ತಕ್ಷಣ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಪಟ್ಟಣದ ವಿದ್ಯಾ ನಗರದ ನಿವಾಸಿಗಳು ಮಂಗಳವಾರ ತಹಸೀಲ್ದಾರ ಹಾಗೂ ಮತ್ತಿತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

 ಕಳೆದ ಹಲವು ವರ್ಷಗಳ ಹಿಂದೆ ಜನ ವಸತಿಗೆ ಮೀಸಲಿದ್ದ ಪಟ್ಟಣದ ವಿದ್ಯಾ ನಗರ ಬಡಾವಣೆಯಲ್ಲಿ ಖಾಸಗಿ ಕಂಪನಿಯೊಂದು ಬೃಹತ್ ಮೊಬೈಲ್ ಟವರ್‌ಗಳನ್ನು ನಿರ್ಮಿಸಿದ್ದು, ಇದರಿಂದ ಸಾರ್ವಜನಿಕರಿಗೆ  ತೊಂದರೆಯಾಗುತ್ತಿದೆ. ಟವರ್‌ಗಳಿಗೆ ಬಳಸುತ್ತಿರುವ ಡಿಜಿ ಸೆಟ್ ಹಾಗೂ ಕಾಂಪ್ರೆಸರ್‌ಗಳಿಂದ ಬಡಾವ ಣೆಯ ಸುತ್ತಮುತ್ತ ಉಂಟಾಗುತ್ತಿರುವ ವಿಪರೀತ ಶಬ್ಧದಿಂದ ಶಬ್ಧಮಾಲಿನ್ಯ ಉಂಟಾಗುತ್ತಿದ್ದು, ಸಾರ್ವಜನಿಕರು ರಾತ್ರಿ ನಿದ್ದೆ ಮಾಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು  ಆರೋಪಿಸಿದ್ದಾರೆ.

ಮೊಬೈಲ್ ಟವರ್‌ಗಳು ಹೊರ ಸೂಸುತ್ತಿರುವ ವಿವಿಧ ರಾಸಾಯನಿಕ ಮತ್ತು ಭೌತ ವಸ್ತುಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿದ್ದು, ಸಾರ್ವ ಜನಿಕರು ಹಲವಾರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಂದ ಬಳಲು ವಂತಾಗಿದೆ ಎಂದು ದೂರಿದರು.

ಟವರಗಳಿಂದ ಹೊರಡುವ ವಿದ್ಯುತ್ ಕಾಂತೀಯ ಅಲೆಗಳ ವಿಕಿರಣ ದಿಂದ ಅನುವಂಶಿಕ ಕಾಯಿಲೆಗಳು ಬರುತ್ತವೆ ಎಂದು ಹಲವು ಸಮೀಕ್ಷೆಗಳು ಹೇಳುತ್ತಿದ್ದು, ತಾಲ್ಲೂಕು ಆಡಳಿತ ತಕ್ಷಣ ಮೊಬೈಲ್ ಟವರ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು  ಒತ್ತಾಯಿಸಿದ್ದಾರೆ.

ಮೊಬೈಲ್ ಟವರ್‌ಗಳನ್ನು ಸ್ಥಳಾಂತ ರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಗಳಿಗೆ, ತಹಸೀಲ್ದಾರರಿಗೆ, ಪುರಸಭೆ ಮುಖ್ಯಾಧಿಕಾರಿ, ಸಿಪಿಐ, ಟವರ್ ಎಂಜಿನಿ ಯರ್ ಮೊದಲಾದವರಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದು, ಅಧಿಕಾರಿ ಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.

 ಸುಭಾಷ್ ಕುಂಬಾರ, ಪರಶುರಾಮ, ಎಫ್.ಜಿ.ಸುರೇಶ, ಎಸ್.ವಿ.ಹಣಗಿನಾಳ, ಎ.ವಿ.ಹಳ್ಳಿಕೇರಿ, ಕೃಷ್ಣ ಜವಳಿ, ಎಸ್. ಎಸ್.ಪಾಟೀಲ, ಎಂ.ವಿ.ಬಾರಡ್ಡಿ, ಎಂ.ಎಂ.ಮರುಳಾರಾಧ್ಯ, ಎನ್. ಎಂ.ಬಡಿಗೇರ, ಎನ್.ಸಿ.ಟಿಕಾರೆ, ಜೆ.ಎಚ್.ತಂಟ್ರಿ, ಶಿವರಾಜ ಸ್ವಾಮಿ, ಜಿ.ಟಿ. ಕಲ್ಲಕುಟಿಗರ, ವೈ.ಎಫ್. ಕರಡಿ, ಕಮಲೇಶ ಜೈನ್, ವಿ.ಎಂ.ಪಾಟೀಲ, ಕೆ.ಗೋವಿಂದಪ್ಪ, ಸಿ.ಎಸ್.ವಡ್ಡಟ್ಟಿ, ವಿ.ವೈ.ತಿಮ್ಮಾಪೂರ, ಎಸ್. ಎ.ತಾಂಬ್ರ ಗುಂಡಿ, ಎಸ್.ಐ.ಅಂಗಡಿ, ಎಂ.ಬಿ. ಹೂಗಾರ, ಎಸ್. ಎಂ.ಹೊಸಮಠ, ಆರ್‌ಬಿ.ದಂಡಿನ, ಟಿ.ಬಿ.ದಂಡಿನ, ಎಸ್. ಐ.ಹೆಸರೂರ, ಎಚ್.ಜೆ.ಪವಾರ, ಆರ್. ಜಿ.ಹಲವಾಗಲಿ, ವಿ.ಎ.ರೋಣದ  ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.