ADVERTISEMENT

ಶಿರಹಟ್ಟಿಯಲ್ಲಿ ಬೇಂದ್ರೆ ಪುಣ್ಯ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:20 IST
Last Updated 27 ಅಕ್ಟೋಬರ್ 2011, 10:20 IST

ಶಿರಹಟ್ಟಿ: ಸರಳ ಮತ್ತು ಸಜ್ಜನಿಕೆ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಮತ್ತು ಬೇಂದ್ರೆ ಅವರ ಜೀವನ ಸಾಧನೆ ಎಂದಿಗೂ ಅಮರ ಎಂದು ವರಕವಿ ದ.ರಾ. ಬೇಂದ್ರೆ  ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ. ಸಂಗಮೇಶ ತಮ್ಮನಗೌಡ್ರ ಹೇಳಿದರು.

ಬೇಂದ್ರೆ ಅವರ 30ನೆ ಪುಣ್ಯತಿಥಿ ಅಂಗವಾಗಿ ಪಟ್ಟಣದ ಎಂಪಿಎಸ್ ಶಾಲೆಯಲ್ಲಿ ನಡೆದ ಬೇಂದ್ರೆ ಸ್ಮರಣೆ, ಉಪನ್ಯಾಸ ಮತ್ತು ಸಾಹಿತಿಗಳ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ದಿಗ್ಗಜರಲ್ಲಿ ಬೇಂದ್ರೆ ಒಬ್ಬರು. ಅವರ ಸಾಹಿತ್ಯ ಭಂಡಾರ ಕನ್ನಡ ನಾಡಿನ ದೊಡ್ಡ ಆಸ್ತಿ. ಅವರ ಬದುಕಿನ ಪ್ರತಿಯೊಂದು ದಿನ ನಮಗೆ ಅವಿಸ್ಮರಣೀಯ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಡಿ. ಮಾಗಡಿ ಮಾತನಾಡಿ, ಶಿರಹಟ್ಟಿ ಪಟ್ಟಣದಲ್ಲಿರುವ ಬೇಂದ್ರೆ ಅವರ ಪೂರ್ವಜರ ಶಿಥಿಲಗೊಂಡಿದ್ದು, ಅದನ್ನು ದುರಸ್ತಿಪಡಿಸಿ ವಾಚನಾಲಯ ಮಾಡುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು. 

ದ.ರಾ. ಬೇಂದ್ರೆ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ. ಸಂಗಮೇಶ ತಮ್ಮನಗೌಡ್ರ ಅವರ ರಚಿಸಿದ ಆರು ಗ್ರಂಥಗಳನ್ನು ಮತ್ತು ಎಂ.ಎಲ್. ಏಣಗಿ ಅವರ ರಚನೆಯ ಒಂದು ಗ್ರಂಥವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಸಾಹಿತಿಗಳಾದ ಡಾ.ಜಿ.ಎಸ್. ಕೋಟಿಮಠ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಫಕೀರೇಶ ಅಕ್ಕಿ, ಮಕ್ಕಳ ಸಾಹಿತಿ ಕೊತ್ತಲ ಮಹದೇವಪ್ಪ, ವಿವೇಕ ಜಾಗೃತ ಬಳಗದ ಅಧ್ಯಕ್ಷ ಎಚ್.ಎಂ. ದೇವಗಿರಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ರಂಗಪ್ಪ ಗುಡಿಮನಿ, ಶಾಲೆ ಮುಖ್ಯ ಶಿಕ್ಷಕ ಎಂ.ಎಲ್. ಏಣಗಿ, ಶಶಿಧರ ರಾನಡೆ, ಸೀಮಣ್ಣ ಅಕ್ಕಿ ಮತ್ತಿತರರು ಹಾಜರಿದ್ದರು. ಎಸ್.ವಿ. ಕಮ್ಮಾರ ಸ್ವಾಗತಿಸಿದರು. ಬಸವರಾಜ ಸಜ್ಜನರ ನಿರೂಪಿಸಿದರು. ಎಂ.ಕೆ. ಲಮಾಣಿ ವಂದಿಸಿದರು. ಪ್ರಜ್ಞಾವಿಕಾಸ ಚಿಂತನಶೀಲ ಅಕಾಡೆಮಿ, ಪ.ಪಂ. ಮಕ್ಕಳ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.