ADVERTISEMENT

ಸತ್ಕಾರ್ಯದಲ್ಲಿ ತೊಡಗಿ: ಅನ್ನದಾನೀಶ್ವರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 8:20 IST
Last Updated 7 ಫೆಬ್ರುವರಿ 2012, 8:20 IST

ಮುಂಡರಗಿ: `ಸಮಾಜಕ್ಕೆ ಕಂಟಕ ವಾಗುವಂತಹ ಕೆಟ್ಟ ಕೆಲಸ ಮಾಡುವುದಕ್ಕಿಂತ ಏನನ್ನೂ ಮಾಡದೆ ಸುಮ್ಮನಿರುವುದು ಉತ್ತಮ. ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ ಹತ್ತು ಹಲವು ತೊಂದರೆಗಳು ಎದುರಾ ಗುವುದು ಸಹಜ. ಅವುಗಳಿಗೆ ಅಂಜದೆ ಸತ್ಕಾರ್ಯದಲ್ಲಿ ನಮ್ಮನ್ನು ತೊಡಗಿಸಿ ಕೊಳ್ಳಬೇಕು~ ಎಂದು ಡಾ.ಅನ್ನ ದಾನೀಶ್ವರ ಸ್ವಾಮೀಜಿ ಸಲಹೆ ನೀಡಿದರು.

ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸ ವದ ಅಂಗವಾಗಿ ಸೋಮವಾರ ಶ್ರಿಮಠದಲ್ಲಿ ಏರ್ಪಡಿಸಿದ್ದ ಜಅವಿ ಸಮಿತಿಯ ಉದ್ಯೋಗಿಗಳ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

`ಮರ-ಗಿಡ, ನದಿ- ಸರೋವರಗಳಂತೆ ಜೀವನದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ದಿನದ ಹದಿನೆಂಟು ಗಂಟೆಗಳ ಕಾಲ ಶ್ರಮ ವಹಿಸಿ ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಪ್ರಶಸ್ತಿ- ಪುರಸ್ಕಾರಗಳು, ಮಾನ- ಸನ್ಮಾನಗಳು ಹುಡುಕಿಕೊಂಡು ಬರುತ್ತವೆ. ಪ್ರಶಸ್ತಿ, ಮಾನ, ಸನ್ಮಾನಗಳಿಗೋಸ್ಕರ ಕೆಲಸ ಮಾಡದೆ ಜನ ಸೇವೆಗೋಸ್ಕರ ನಾವೆಲ್ಲ ಕೆಲಸ ಮಾಡಬೇಕಾಗಿದೆ. ಪ್ರಾಮಾಣಿಕ ಸೇವೆಯಲ್ಲಿ ದೊರೆಯುವ ಸುಖ, ನೆಮ್ಮದಿ ಬೇರಾವುದರಿಂದಲೂ ದೊರೆಯುವುದಿಲ್ಲ~ ಎಂದು ಅವರು ತಿಳಿಸಿದರು.

`ನಾಡಿನ ಉದ್ದಗಲಕ್ಕೂ ವಿವಿಧ ಶಾಲಾ ಕಾಲೇಜುಗಳನ್ನು ಹೊಂದಿ, ಲಕ್ಷಾಂತರ ಜನರಿಗೆ ವಿದ್ಯಾದಾನ ಮಾಡುತ್ತಿರುವ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯನ್ನು ಡೀಮ್ಡ ವಿಶ್ವವಿದ್ಯಾಲಯವನ್ನಾಗಿ ಮಾಡಬೇಕು. ಜಅವಿ ವಿದ್ಯಾ ಸಮಿತಿ ರಾಜ್ಯದಲ್ಲಿಯೇ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿದ್ದು, ಅದನ್ನು ಇನ್ನೂ ಉತ್ತಮ ರೀತಿಯಲ್ಲಿ ಬೆಳೆಸಬೇಕು~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ದೇವರು ಅಭಿಪ್ರಾಯಪಟ್ಟರು.

ಲಿಂಗನಾಯಕನ ಹಳ್ಳಿಯ ಚನ್ನವೀರ ಸ್ವಾಮೀಜಿ, ಬಾಲ್ಕಿಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ, ಶಂಕರಗೌಡ ಬೀರಾದಾರ ಹಾಗೂ ಮತ್ತಿತರರು ಮಾತನಾಡಿದರು. ಬೊಮ್ಮನಹಳ್ಳಿಯ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ, ಗಡಿಗೌಡಗಾವಿನ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿಯ ಅಲ್ಲಂ ದೊಡ್ಡಪ್ಪ, ಅಂದಾನಪ್ಪ ಪಟ್ಟಣಶೆಟ್ಟರ, ಎ.ಕೆ.ಬೆಲ್ಲದ, ಬಾಲಚಂದ್ರಗೌಡ ಪಾಟೀಲ, ಬಿ.ಎಸ್.ಹಿರೇಗೌಡರ, ಶಂಕ್ರಪ್ಪ ಬಾರಿಕಾಯಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.