ADVERTISEMENT

‘ದೊಡ್ಡಾಟ ಸಂಶೋಧನಾ ಕೇಂದ್ರ ಸ್ಥಾಪನೆ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 8:59 IST
Last Updated 3 ಡಿಸೆಂಬರ್ 2013, 8:59 IST

ಗದಗ: ಉತ್ತರ ಕರ್ನಾಟಕದ ಕಲೆ ದೊಡ್ಡಾಟ ನಶಿಸಿ ಹೋಗುತ್ತಿರುವ ಹಿನ್ನಲೆಯಲ್ಲಿ  ಗದಗ - ಬೆಟಗೇರಿಯಲ್ಲಿ ದೊಡ್ಡಾಟ ಕಲಿಕಾ ಕೇಂದ್ರ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ನಗರದಲ್ಲಿ ಜಿ.ಬಿ. ಬಣ್ಣದ ಕಲಾಮೇಳದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸುಮಾರು ರೂ. 5 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪಿಸಲು ಸಚಿವೆ ಉಮಾಶ್ರೀ ಮತ್ತು ನಾನು ಸರ್ಕಾರದ ಮೇಲೆ ಒತ್ತಡ ತಂದು ಕಾರ್ಯ ನಿರ್ವಹಿಸಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಕಲಾವಿದರ ಜೀವನ ಎಷ್ಟು ಕಷ್ಟ ಎನ್ನುವ ಅನುಭವ ಇದೆ.  ಕಲಾ ಸಂಘಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಈ ದಿನಮಾನದಲ್ಲಿ ಬಹಳ ಕಷ್ಟಕರ. ಅಶೋಕ ಬಣ್ಣದವರು ಬಡ ನೇಕಾರರನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಹಾಗೂ  ಹೊರ ರಾಜ್ಯಗಳಲ್ಲಿ ಕೂಡ ದೊಡ್ಡಾಟ ಪ್ರದರ್ಶನ ನೀಡುತ್ತಿರುವುದು ಮೆಚ್ಚುಗೆಯ ಕೆಲಸ. ಈ ಕಲೆಗಾಗಿ ಇಲಾಖೆಯಿಂದ ಎಲ್ಲ ಸಹಾಯ, ಸಹಕಾರ ನೀಡಲಾಗುವುದು. ಅಕ್ಕ ಸಮ್ಮೇಳನ (ಅಮೇರಿಕ ದೇಶದಲ್ಲಿ) ಪ್ರದರ್ಶನಗೊಳ್ಳಲು ಪ್ರಯತ್ನಿಸಲಾಗು­ವುದು ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಡಿ. ಆರ್. ಪಾಟೀಲ ಮಾತನಾಡಿ,  ಯುವಪೀಳಿಗೆ ದೊಡ್ಡಾಟ ಕಲೆಯತ್ತ ಗಮನಹರಿಸ­ಬೇಕು.   ನಾಡು, ನುಡಿ, ಸಂಸ್ಕೃತಿ ಉಳಿಸಲು ಯುವಕರು ಮುಂದೆ ಬರಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾಮೇಳದ ಅಧ್ಯಕ್ಷ ಅಶೋಕ ಬಣ್ಣದ, ಬಿ. ಬಿ. ಬಣ್ಣದವರು ಹಾಕಿಕೊಟ್ಟ ಮಾರ್ಗದಲ್ಲಿ ಈ ಕಲೆಯನ್ನು ಉಳಿಸಿ ಬೆಳಸಿಕೊಂಡು ಹೋಗಲು ಎಲ್ಲ ಕಲಾವಿದ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಗಣೇಶಸಿಂಗ ಬ್ಯಾಳಿ ಸ್ವಾಗತಿಸಿದರು, ದಶರಥ ಕೊಳ್ಳಿ ವಂದಿಸಿದರು.  ರಾಜು ಮಾಳೊದೆ ನಿರೂಪಿಸಿದರು. ಜಿಲ್ಲಾ ನೇಕಾರ  ಸಮುದಾಯಗಳ ಒಕ್ಕೂಟದಿಂದ ಹಾಗೂ ಗದಗ ತಾಲೂಕಿನ ನೇಕಾರರ ಒಕ್ಕೂಟಗಳ ವತಿಯಿಂದ ಸಚಿವೆ ಉಮಾಶ್ರೀ ಹಾಗೂ ಎಚ್. ಕೆ. ಪಾಟೀಲರನ್ನು  ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.