ಗದಗ: ಯಾವುದೇ ಕಾಮಗಾರಿ ಅಥವಾ ಯೋಜನೆ ಜಾರಿಯ ಕುರಿತು ದೂರು ಬರದಂತೆ ಆರ್ಥಿಕ ವರ್ಷದ ಅನುದಾನವನ್ನು ನಿಗದಿತ ಸಮಯದಲ್ಲಿ ಪೂರ್ಣವಾಗಿ ವೆಚ್ಚ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಜಿ. ತುರುಮರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ಮಾತನಾಡಿ, ಅನುದಾನ ಇನ್ನೂ ಬಿಡುಗಡೆ ಆಗಿರದಿದ್ದ ಪಕ್ಷದಲ್ಲಿ ತಕ್ಷಣವೇ ಇಲಾಖೆಯ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಜರುಗಿಸಬೇಕು.
ಮಾಧ್ಯಮಗಳಲ್ಲಿ ವಿವಿಧ ಇಲಾಖೆಗಳ ಯೋಜನೆ ಹಾಗೂ ಕಾಮಗಾರಿಗಳ ಕುರಿತ ದೂರು ಹಾಗೂ ಇತರೆ ವರದಿಗಳ ಕುರಿತು ತಕ್ಷಣವೇ ಸ್ಪಂದಿಸಬೇಕು. ಜಿಲ್ಲೆಯ ಹಿಂಗಾರು ಕೃಷಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ, ವಿವಿಧ ಇಲಾಖೆಗಳು ನಡೆಸುತ್ತಿರುವ ವಸತಿ ನಿಲಯಗಳಲ್ಲಿ ಸ್ವಚ್ಛತೆ ಸಮಯಕ್ಕೆ ಸರಿಯಾಗಿ ಸೌಲಭ್ಯ ಒದಗುವಿಕೆ, ಶಿಕ್ಷಣ ಇಲಾಖೆಯಿಂದ ಜಾರಿಯಾಗಿರುವ ಕ್ಷೀರ ಭಾಗ್ಯ ಯೋಜನೆ ಸಂಬಂಧಿತ ಶಾಲಾ ಮಕ್ಕಳಿಗೆ ಸರಿಯಾಗಿ ತಲುಪುವ ಕುರಿತು ತೀವ್ರ ನಿಗಾವಹಿಸಬೇಕು ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ದೊಡ್ಡಗೌಡ್ರ ಚರ್ಚೆಯಲ್ಲಿ ಪಾಲ್ಗೊಂಡು ಕೃಷಿ ಇಲಾಖೆಯಿಂದ ತಾಲ್ಲೂಕುವಾರು ಪರಿಶಿಷ್ಟ ಕೃಷಿ ಫಲಾನುಭವಿಗಳಿಗೆ ರಿಯಾಯತಿ ದರದ ಯಂತ್ರೋಪಕರಣ ಹಾಗೂ ಇತರೆ ಸೌಲಭ್ಯ ನೀಡುವ ಕಾರ್ಯವನ್ನು ತ್ವರಿತಗೊಳಿಸಬೇಕು.
ಗ್ರಾಮೀಣ ಪ್ರದೇಶದಲ್ಲಿ ಶುದ್ಧ ನೀರು ಒದಗಿಸುವ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಏಜೆನ್ಸಿಯನ್ನು ಯೋಜನಾ ಜಾರಿ ಪಟ್ಟಿಯಿಂದ ತೆಗೆದು ಹಾಕಬೇಕು. ಗ್ರಾಮೀಣ ರಸ್ತೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳು ತೀರ ವಿಳಂಬವಾಗಿ ಜಾರಿಯಾಗಿತ್ತಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಶಿಕ್ಷಣ ಇಲಾಖೆಯಲ್ಲಿ 108 ಶಿಕ್ಷಕರಿಗೆ ಕರಾಟೆ ತರಬೇತಿ ನೀಡಲಾಗಿದೆ ಎಂಬ ಪ್ರಸ್ತಾವನೆಗೆ ವಿರೋಧ ವ್ಯಕ್ತ ಪಡೆಸಿದ ದೊಡ್ಡಗೌಡ್ರ ಅವರು ಕರಾಟೆ ತರಬೇತಿ ಯಾವಾಗ, ಎಲ್ಲಿ, ನಡೆಸಲಾಗಿದೆ ಎಂದು ವಿವರಣೆ ನೀಡುವಂತೆ ಸೂಚಿಸಿದರು.
ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಹಾಗೂ ಅಗತ್ಯವಿರುವಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸೂಕ್ತ ಕ್ರಮ ಜರುಗಿಸಲು ಜಿಲ್ಲಾ ಪಂಚಾಯ್ತಿ ಪ್ರಭಾರ ಅಧ್ಯಕ್ಷ ರಮೇಶ ಮುಂದಿನಮನಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ರೈತರು ಬರಿವಿಮಾ ಕಂತು ಕಟ್ಟುವುದೇ ಆಗಿದ್ದು, ವಿಮೆ ಹಣ ಸೂಕ್ತವಾಗಿ ಸಂದಾಯವಾಗುತ್ತಿಲ್ಲ. ಇದಕ್ಕೆ ಆಡಳಿತಾತ್ಮಕವಾಗಿ ಇರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದರು. ಗ್ರಾಮೀಣ ರಸ್ತೆ ದುರಸ್ತಿಗಾಗಿ ಒಟ್ಟಾರೆ 20 ಕೋಟಿ ರೂಪಾಯಿ ಅನುದಾನ ಬೇಡಿಕೆ ಸಲ್ಲಿಸಿದ್ದು ಜಿಲ್ಲಾಡಳಿತ 1 ಕೋಟಿ ಹಣ ಬಿಡುಗಡೆ ಮಾಡಿದೆ.
115 ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿದ್ದು ಆರೋಗ್ಯ ಇಲಾಖೆಯ 116 ಅಟೆಂಡರ ಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಒಟ್ಟಾರೆ ಸ್ವೀಕೃತ 56,913 ಅರ್ಜಿಗಳ ಪೈಕಿ 28,269 ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದೆ. ನವೆಂಬರ್ ಅಂತ್ಯಕ್ಕೆ 29,862 ಅರ್ಜಿಗಳು ಬಾಕಿ ಇದ್ದು,ಇದೇ 20ರ ಒಳಗಾಗಿ ಪರಿಶೀಲನೆ ಕಾರ್ಯ ಪೂರ್ಣಗೊಳಿಸಲಾಗುವುದು.
ಜಿಲ್ಲೆಯಲ್ಲಿ ಒಟ್ಟಾರೆ ಸರಾಸರಿ 641 ಮಿ.ಮೀ ಪೈಕಿ ಇದೇ 12 ರವರೆಗೆ ಶೇ 80ಷ್ಟು ಅಂದರೆ 518 ಮಿ.ಮೀ ಮಾತ್ರ ಮಳೆ ಆಗಿದೆ. ಹಿಂಗಾರು ಕಡ್ಲೆ, ಗೋಧಿ, ಕುಸುಬಿ, ಬೆಳೆ ಉತ್ತಮವಾಗಿದ್ದು ಶೇಂಗಾ ಬಿತ್ತನೆ ನಡೆದಿದೆ. ಬೆಳೆಗಳ ರೋಗಗಳ ಕುರಿತು ನಿಗಾ ವಹಿಸಿದ್ದು ಚಿಕಿತ್ಸೆ ಕ್ರಮ ಕುರಿತು ರೈತರಿಗೆ ತಿಳಿಸಲಾಗುತ್ತಿದೆ. ಕಳೆದ ಮುಂಗಾರಿನಲ್ಲಿ ಬೆಳೆ ಹಾನಿ ಆದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿಯನ್ನು ಕಳುಹಿಸಲಾಗಿದೆ ಎಂದು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ವಿವರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.