ಮುಂಡರಗಿ: ಜಮೀನಿಗೆ ಸಿಂಪಡಿಸುವ ಕ್ರಿಮಿನಾಶಕ, ರಸಗೊಬ್ಬರ ಹಾಗೂ ಮತ್ತಿತರ ಕೃಷಿ ಸಾಮಗ್ರಿಗಳನ್ನು ಹೇರಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಟ್ಯ್ರಾಕ್ಟರ್ನಲ್ಲಿದ್ದ ಸಾಮಾನುಗಳೆಲ್ಲ ನದಿ ಪಾಲಾಗಿರುವ ಘಟನೆ ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಬಳಿ ಶನಿವಾರ ಸಂಜೆ ಸಂಭವಿಸಿದೆ.
ಗುಮ್ಮಗೋಳ ಗ್ರಾಮದ ರೈತರಾದ ಗೋಣಿಬಸಪ್ಪ ಜೋಗಿನ, ಕೋಟೆಪ್ಪ ಹುಳಿಸೊಪ್ಪಿನ ಹಾಗೂ ರೇವಣಸಿದ್ದಪ್ಪ ಜೋಗಿನ ಅವರು ತಮ್ಮ ಜಮೀನಿನ ಬೆಳೆಗಳಿಗಾಗಿ ₹1.50ಲಕ್ಷ ಮೌಲ್ಯದ ವಿವಿಧ ರಸಗೊಬ್ಬರ, ಕ್ರಿಮಿನಾಶಕ ಔಷಧಿ ಹೇರಿಕೊಂಡು ಹೂವಿನಹಡಗಲಿಯಿಂದ ಹಮ್ಮಿಗಿ ಮಾರ್ಗವಾಗಿ ಗುಮ್ಮಗೋಳಕ್ಕೆ ಬರುವಾಗ ಈ ಘಟನೆ ನಡೆದಿದೆ.
ಟ್ರ್ಯಾಕ್ಟರ್ನಲ್ಲಿದ್ದ ರೈತರ ಸಮೇತ ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳು ನೀರಿನ ಪಾಲಾದವು. ತಕ್ಷಣ ಹತ್ತಿರದಲ್ಲಿದ್ದ ಗ್ರಾಮಸ್ಥರು ಆಗಮಿಸಿ, ರೈತರನ್ನು ಹೊರತೆಗೆಯಲು, ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್ ಹೊರತೆಗೆಯಲು ಸಹಾಯ ಮಾಡಿದರು. 100 ಚೀಲ ರಸಗೊಬ್ಬರ ಪೈಕಿ 20 ಚೀಲಗಳು ಮಾತ್ರ ರೈತರಿಗೆ ಸಿಕ್ಕಿವೆ. ಇನ್ನುಳಿದ 80 ಚೀಲ ಗೊಬ್ಬರ, ಕ್ರಿಮಿನಾಶಕ ಔಷಧಿ ನೀರು ಪಾಲಾಗಿವೆ.
ಕಿರು ಸೇತುವೆ ಹಾಗೂ ರಸ್ತೆಯನ್ನು ದುರಸ್ತಿಗೊಳಿಸುವಂತೆ ಈಗಾಗಲೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಳ್ಳಲಾಗಿದೆ ಆರದೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.
ವಿಷಯ ತಿಳಿದ ಶಾಸಕ ಡಾ.ಚಂದ್ರು ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆ ಮೇಲೆ ಕಿರುಸೇತುವೆ ನಿರ್ಮಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.