ರೋಣ: ತಾಲ್ಲೂಕಿನ ಕೊತಬಾಳ ಗ್ರಾಮದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಂಕಲಗಿ ಅಡವಿ ಸಿದ್ದೇಶ್ವರ ಮಠದ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಆರಾಧ್ಯ ದೈವ ಅಡವಿ ಸಿದ್ದೇಶ್ವರರ 70ನೇ ಪುಣ್ಯ ಸ್ಮರಣೆ ಹಾಗೂ ಶ್ರೀಮಠದ ಹಿಂದಿನ ಪೀಠಾಧಿಪತಿಗಳಾದ ರಾಜಶೇಖರ ಶಿವಯೋಗಿಗಳ 24ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡವು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಕರ್ತೃ ಗದ್ದುಗೆಗೆ ಅಭಿಷೇಕ, ಪಲ್ಲಕ್ಕಿ ಉತ್ಸವ, ಸರ್ವಧರ್ಮ ಸಾಮೂಹಿಕ ವಿವಾಹಗಳು, ಶಿವದೀಕ್ಷೆ, ಅಯ್ಯಾಚಾರ, ರೋಣ ಸುತ್ತಮುತ್ತಲ ಭಾಗದ ಮಠಾಧಿಪತಿಗಳಿಂದ ಧರ್ಮಸಭೆ ಮತ್ತು ಸನ್ಮಾನ ಕಾರ್ಯಕ್ರಮ ನಡೆದವು. ಸಂಜೆ ಶ್ರೀಮಠದ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ಕೊತಬಾಳ, ಕುರಹಟ್ಟಿ, ಹಿರೇಹಾಳ, ಮುಗಳಿ, ಹೂನ್ನಿಗನೂರು, ಬಳಗೋಡ, ರೋಣ, ಹುಲ್ಲೂರು, ಮಾಡಲಗೇರಿ, ನೈನಾಪುರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.