ADVERTISEMENT

ಗದಗ: ಹುಳು ಹಿಡಿದ ಆಹಾರ, ಜಿ.ಪಂನಲ್ಲಿ ಅಂಗನವಾಡಿ ಪೌಷ್ಟಿಕ ಆಹಾರದ ನೈಜ ದರ್ಶನ..!

ಹುಳು ಹಿಡಿದ ಆಹಾರದೊಂದಿಗೆ ಕೆಡಿಪಿ ಸಭೆಗೆ ಬಂದ ಅಧ್ಯಕ್ಷೆ ರೂಪಾ ಅಂಗಡಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 14:49 IST
Last Updated 16 ಅಕ್ಟೋಬರ್ 2018, 14:49 IST
ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾದ ಹುಳು ಹಿಡಿದ ತೊಗರಿಬೇಳೆಯನ್ನು ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಪ್ರಭಾರ ಅಧ್ಯಕ್ಷೆ ರೂಪಾ ಅಂಗಡಿ ಪ್ರದರ್ಶಿಸಿದರು. ಸಿಇಒ ಮಂಜುನಾಥ ಚವ್ಹಾಣ ಇದ್ದಾರೆ
ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾದ ಹುಳು ಹಿಡಿದ ತೊಗರಿಬೇಳೆಯನ್ನು ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಪ್ರಭಾರ ಅಧ್ಯಕ್ಷೆ ರೂಪಾ ಅಂಗಡಿ ಪ್ರದರ್ಶಿಸಿದರು. ಸಿಇಒ ಮಂಜುನಾಥ ಚವ್ಹಾಣ ಇದ್ದಾರೆ   

ಗದಗ: ಹುಳು ಹಿಡಿದ ಹೆಸರುಕಾಳು, ಶೇಂಗಾ, ತೊಗರಿಬೇಳೆ ಸೇರಿದಂತೆ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳ ‘ಮಾದರಿ’ಯೊಂದಿಗೆ ಮಂಗಳವಾರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೆ ಬಂದ ಪ್ರಭಾರ ಅಧ್ಯಕ್ಷೆ ರೂಪಾ ಅಂಗಡಿ, ಪೌಷ್ಟಿಕ ಆಹಾರದ ಅಸಲಿ ಗುಣಮಟ್ಟ ತೆರೆದಿಟ್ಟರು.

ಕಣ್ಣೆದುರಿಗೆ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ, ಯಾವುದೇ ಕ್ರಮ ವಹಿಸಿದೆ ನಿರ್ಲಕ್ಷ್ಯ ತಳೆದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶ ಪಡಗಣ್ಣವರ ಅವರನ್ನು ತೀವ್ರ ತರಾಟೆಗೆ ತೆಗದುಕೊಂಡರು.

ಆಹಾರ ಪದಾರ್ಥಗಳನ್ನು ಚೀಲದಿಂದ ತೆಗೆದು, ಮೇಜಿನ ಮೇಲೆ ಹರಡಿದ ಅವರು, ಉಪನಿರ್ದೇಶಕರನ್ನು ಕರೆದು, ಇದನ್ನೇ ಅಲ್ಲವಾ ನೀವು ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ತಿನ್ನಲು ಕೊಡುವುದು, ಇದರಿಂದ ಅಪೌಷ್ಟಿಕತೆ ನಿವಾರಣೆ ಆಗಿದೆಯಾ ಎಂದು ಪ್ರಶ್ನಿಸಿದರು.

ADVERTISEMENT

‘ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನೆ ಹಾಗೂ ತರಬೇತಿ ಕೇಂದ್ರದಿಂದ (ಎಂಎಸ್‍ಪಿಟಿಸಿ) ನೇರವಾಗಿ ಅಂಗನವಾಡಿಗೆ ಆಹಾರ ಪೂರೈಕೆಯಾಗುತ್ತವೆಯೋ ಅಥವಾ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಗೋದಾಮಿಗೆ ಬಂದು ತೆಗೆದುಕೊಂಡು ಹೋಗುತ್ತಾರೋ’ ಎಂಬ ಅಧ್ಯಕ್ಷೆಯ ಪ್ರಶ್ನೆಗೆ ಉತ್ತರಿಸಲು ಉಪನಿರ್ದೇಶಕರು ತಡವರಿಸಿದರು.

‘ರೋಣ ಪಟ್ಟಣ ವ್ಯಾಪ್ತಿಯ ಅಂಗನವಾಡಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಕೆಯಾಗಿವೆ. ನರಗುಂದ ತಾಲ್ಲೂಕಿನ ವಿವಿಧ ಅಂಗನವಾಡಿಗಳಿಗೆ ಭೇಟಿ ನೀಡಿದಾಗಲೂ ಇದೇ ಪರಿಸ್ಥಿತಿ ಕಂಡುಬಂದಿದೆ.‘ಎಂಎಸ್‍ಪಿಟಿಸಿ’ ಪೂರೈಸುವ ಆಹಾರದ ಗುಣಮಟ್ಟ ಪರಿಶೀಲಿಸುವವರು ಯಾರು? ಇಲಾಖೆಯ ಉಪ ನಿರ್ದೇಶಕರಂತೂ ಯಾವುದೇ ತಾಲ್ಲೂಕಿಗೆ ಭೇಟಿ ನೀಡಿರುವ ಒಂದು ಉದಾಹರಣೆಯೂ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೋಣ ತಾಲ್ಲೂಕಿನ ವಿವಿಧೆಡೆ ಜಾನುವಾರು ಗಣತಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತಿರುವ ಕುರಿತೂ ಅಧ್ಯಕ್ಷೆ ಸಭೆಯ ಗಮನ ಸೆಳೆದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ತಪ್ಪು ಮಾಹಿತಿ ನೀಡುವ ಬದಲು, ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಲು ಶ್ರಮಿಸಿ’ ಎಂದರು. ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಎಸ್.ಸಿ.ಮಹೇಶ, ಯೋಜನಾಧಿಕಾರಿ ಬಿ.ಆರ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.