ADVERTISEMENT

‘ಹೊಂದಾಣಿಕೆ ಸಂತೃಪ್ತ ಕುಟುಂಬದ ಸೂತ್ರ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:25 IST
Last Updated 1 ಫೆಬ್ರುವರಿ 2026, 4:25 IST
ಮುಂಡರಗಿಯ ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನೂತನ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಮುಂಡರಗಿಯ ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನೂತನ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು   

ಮುಂಡರಗಿ: ‘ಹೊಂದಾಣಿಕೆಯೇ ಸಂತೃಪ್ತ ಕುಟುಂಬದ ಸೂತ್ರವಾಗಿದ್ದು, ನೂತನ ವಧು– ವರರು ತಮ್ಮ ತಂದೆ, ತಾಯಿ, ಅತ್ತೆ, ಮಾವ ಹಾಗೂ ಕುಟುಂಬದ ಎಲ್ಲ ಸದಸ್ಯರನ್ನು ಪ್ರೀತಿ ಹಾಗೂ ಗೌರವದಿಂದ ಕಾಣಬೇಕು’ ಎಂದು ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ಇಲ್ಲಿಯ ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಅನ್ನದಾನೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಸಂಸ್ಕಾರ ಕಡೆಮೆಯಾಗುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು. ಮನೆಗೊಂದು ಮರನೆಟ್ಟು ಪರಿಸರ ಸಂರಕ್ಷಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮೈಸೂರಿನ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಧರ್ಮವಿಲ್ಲದಿದ್ದರೆ ಜೀವನ ವ್ಯರ್ಥವಾಗುತ್ತದೆ. ಸತಿ, ಪತಿಗಳು ಕುಟುಂಬ ಧರ್ಮವನ್ನು ಪರಿಪಾಲಿಸಬೇಕು. ಕಾಯಾ, ವಾಚಾ, ಮನಸಾ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬದುಕಬೇಕು’ ಎಂದು ತಿಳಿಸಿದರು.

ಕುಕನೂರಿನ ಮಹಾದೇವ ಸ್ವಾಮಿಜಿ ಮಾತನಾಡಿ, ‘ಇಲ್ಲಿಯ ಅನ್ನದಾನೀಶ್ವರ ಮಠವು ಧರ್ಮ ಜಾಗೃತಿಯ ಜೊತೆಗೆ ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅನ್ನದಾನೀಶ್ವರ ವಿದ್ಯಾ ಸಮಿತಿಯು ಈಚೆಗೆ ಶತಮಾನೋತ್ಸವ ಆಚರಿಸಿಕೊಂಡಿರುವುದು ಅದಕ್ಕೆ ಸಾಕ್ಷಿಯಾಗಿದೆ’ ಎಂದು ತಿಳಿಸಿದರು.

15 ಜೋಡಿಗಳು ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನವ ಜೀವನಕ್ಕೆ ಕಾಲಿಟ್ಟರು. ಅದಕ್ಕೂ ಪೂರ್ವದಲ್ಲಿ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ವಟುದೀಕ್ಷಾ ಸಮಾರಂಭ ಜರುಗಿತು.

ಹೊಳಲಿನ ಚನ್ನಬಸವ ದೇವರು ಸ್ವಾಗತಿಸಿದರು. ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಹಿರೇಮಲ್ಲನಕೇರಿಯ ಅಭಿನವ ಚನ್ನವೀರ ಸ್ವಾಮೀಜಿ, ಬಳೂಟಗಿಯ ಶಿವಕುಮಾರ ದೇವರು, ಸಂಗಮೇಶ ದೇವರು, ಜಾತ್ರಾ ಸಮಿತಿಯ ಕೈಲಾಸಪತಿ ಹಿರೇಮಠ, ಮಹೇಶ ಜಂತ್ಲಿ, ಶಿವು ವಾಲಿಕಾರ, ಆನಂದ ನಾಡಗೌಡರ, ಕೆ.ವಿ.ಹಂಚಿನಾಳ, ಬಿ.ಜಿ.ಜವಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.