
ಗದಗ: ‘ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶ ಕಂಡ ಅಪರೂಪದ ಜನನಾಯಕ’ ಎಂದು ಬಿಜೆಪಿ ಗದಗ ಜಿಲ್ಲಾ ಘಟಕದ ಕೋಶಾಧ್ಯಕ್ಷ ನಾಗರಾಜ ಕುಲಕರ್ಣಿ ಹೇಳಿದರು.
ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶ್ರೇಷ್ಠ ಸಂಸದೀಯಪಟು, ವಾಗ್ಮಿ, ಕವಿ, ಪ್ರಧಾನಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದ ವಾಜಪೇಯಿ ಅವರು ತಮ್ಮ ಹಾಸ್ಯಪ್ರಜ್ಞೆ, ಶ್ರೇಷ್ಠ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅಜಾತ ಶತ್ರು ಎಂದೇ ಖ್ಯಾತಿ ಗಳಿಸಿ, ಎಲ್ಲರ ಅಚ್ಚುಮೆಚ್ಚಿನ ನಾಯಕರಾಗಿದ್ದರು’ ಎಂದರು.
ಸಂಸತ್ತಿನಲ್ಲಿ ಯಾವುದೇ ವಿಷಯ ಮಾತನಾಡುವಾಗ ಅಟಲ್ ಜೀ ತಮ್ಮ ವಾದವನ್ನು ನಿಶ್ಚಿತ ರೂಪದಲ್ಲಿ ಮಂಡಿಸುತ್ತಿದ್ದರು. ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿ ಮಾತನಾಡುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ ಮಾತನಾಡಿ, ‘ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ವಾಜಪೇಯಿ ಅವರು ದೇಶದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ’ ಎಂದು ಬಣ್ಣಿಸಿದರು.
ಹಿರಿಯ ಮುಖಂಡರಾದ ಎಂ.ಎಸ್.ಕರಿಗೌಡ್ರ, ಶ್ರೀಪತಿ ಉಡುಪಿ ಮಾತನಾಡಿದರು.
ಹಿರಿಯರಾದ ಜಗನ್ನಾಥಸಾ ಭಾಂಡಗೆ, ಎಂ.ಎಂ.ಹಿರೇಮಠ, ಲಿಂಗರಾಜ ಪಾಟೀಲ ಮಲ್ಲಾಪೂರ, ಬೂದಪ್ಪ ಹಳ್ಳಿ, ರವಿ ದಂಡಿನ, ಭೀಮಸಿಂಗ್ ರಾಠೋಡ, ಸಿದ್ದು ಪಲ್ಲೇದ, ಅಶೋಕ ಸಂಕಣ್ಣವರ, ನಿರ್ಮಲಾ ಕೊಳ್ಳಿ, ಸಂತೋಷ ಅಕ್ಕಿ, ವಿಜಯಲಕ್ಷ್ಮೀ ಮಾನ್ವಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ರವಿ ಮಾನ್ವಿ, ಪಾರ್ವತಿ ಪಟ್ಟಣಶೆಟ್ಟಿ, ಶ್ವೇತಾ ದಂಡಿನ, ಪ್ರೀತಿ ಶಿವಪ್ಪನಮಠ ಇದ್ದರು.