ADVERTISEMENT

ಪುಟ್ಟರಾಜರ ಸಾಹಿತ್ಯ, ಸಂಗೀತ ಸಾಧನೆ ವಿಶಿಷ್ಟ

ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:19 IST
Last Updated 14 ಸೆಪ್ಟೆಂಬರ್ 2024, 16:19 IST
ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಚನ ಕೇಳಲು ನೂರಾರು ಮಂದಿ ಸೇರಿದ್ದರು
ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಚನ ಕೇಳಲು ನೂರಾರು ಮಂದಿ ಸೇರಿದ್ದರು   

ಬೆಳವಣಿಕಿ (ರೋಣ): ‘ಪಂ.ಪುಟ್ಟರಾಜ ಕವಿ ಗವಾಯಿಗಳವರು ಜಗತ್ತಿನ ಎಂಟನೇ ಅದ್ಭುತ’ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಬಣ್ಣಿಸಿದರು.

ಸ್ಥಳೀಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಲಿಂ. ಪಂ.ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೆ ಹಾಗೂ ತೃತೀಯ ವರ್ಷದ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಪುಟ್ಟರಾಜರು ಅಂಧರಿಗಾಗಿ ಪ್ರಪಂಚದ ಕಣ್ಣು ತೆರೆಸಿದರು. ಅವರ ಸಾಹಿತ್ಯ, ಸಂಗೀತದ ಸಾಧನೆ ವಿಶಿಷ್ಟವಾಗಿದ್ದು, ಅವರು ಬರೆದ ಬಸವ ಪುರಾಣವನ್ನು ರಾಷ್ಟ್ರಪತಿಗಳೇ ತಲೆಯ ಮೇಲೆ ಹೊತ್ತು ಮೆರೆದಿದ್ದು ಅದರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಪುಟ್ಟರಾಜರು ಭಕ್ತರ ಮನಸ್ಸಿನ ಸಾಮ್ರಾಟರಾಗಿ ಅವರ ಹೃದಯ ಸಿಂಹಾಸನದಲ್ಲಿ ಅಲಂಕೃತರಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಬಳಗಾನೂರ ಶಿವಶಾಂತವೀರ ಶರಣರು ಮಾತನಾಡಿ, ‘ದಿವ್ಯ ಚೇತನಗಳ ಸ್ಮರಣೋತ್ಸವ ನಡೆದಾಗ ಮನುಷ್ಯನ ಜೀವನ ಸುಂದರಗೊಳ್ಳುತ್ತದೆ. ಗುರುಪುಟ್ಟರಾಜರು ಬದುಕಿನ ಸಾಧನೆಯಿಂದ ದೊಡ್ಡವರಾದವರು’ ಎಂದು ತಿಳಿಸಿದರು.

ಕಿಲ್ಲಾತೋರಗಲ್ಲದ ಗಚ್ಚಿನ ಹಿರೇಮಠದ ಚನ್ನಮಲ್ಲಶಿವಾಚಾರ್ಯರು ಮಾತನಾಡಿದರು.

ಅಡ್ನೂರ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಹಾಗೂ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಭಾಗವಹಿಸಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕೇಳಲು ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಬಂದಿದ್ದರು.

ಸೋಮಶೇಖರ ಚರೇದ ಸ್ವಾಗತಿಸಿದರು. ಪುಟ್ಟರಾಜ ತಾಳಿ ಪ್ರಾರ್ಥಿಸಿದರು. ಮಂಜುನಾಥ ಶಾಸ್ತ್ರೀ, ಶಿವಪೂಜೆ ಅಬ್ಬಿಗೇರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.