ADVERTISEMENT

‘ಕಾರ್ಮಿಕರ ಹಿತರಕ್ಷಣೆಗೆ ತುರ್ತಾಗಿ ಸ್ಪಂದಿಸಿ’

ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 16:39 IST
Last Updated 6 ನವೆಂಬರ್ 2020, 16:39 IST
ಗದುಗಿನ ವಿನೋದ ಸಿ. ಪಟೇಲ್, ರಮೇಶ ಹೆಗಡಿಕಟ್ಟಿ, ಮುಂಡರಗಿಯ ಅನಂತ ಆರ್. ಚಿತ್ರಗಾರ, ಗಜೇಂದ್ರಗಡದ ಸಿದ್ದಲಿಂಗಪ್ಪ ಕನಕೇರಿ, ಶಿರೋಳದ ಲಾಲಸಾಬ ಅರಗಂಜಿ, ಲಕ್ಷ್ಮೇಶ್ವರದ ಪುರಾಣಿಕಮಠ ಅವರಿಗೆ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗದುಗಿನ ವಿನೋದ ಸಿ. ಪಟೇಲ್, ರಮೇಶ ಹೆಗಡಿಕಟ್ಟಿ, ಮುಂಡರಗಿಯ ಅನಂತ ಆರ್. ಚಿತ್ರಗಾರ, ಗಜೇಂದ್ರಗಡದ ಸಿದ್ದಲಿಂಗಪ್ಪ ಕನಕೇರಿ, ಶಿರೋಳದ ಲಾಲಸಾಬ ಅರಗಂಜಿ, ಲಕ್ಷ್ಮೇಶ್ವರದ ಪುರಾಣಿಕಮಠ ಅವರಿಗೆ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಗದಗ: ‘ಕೋವಿಡ್-19ನಿಂದ ತತ್ತರಿಸಿರುವ ಸಣ್ಣ ಕೈಗಾರಿಕೆಗಳಿಗೆ ಕಾಯಕಲ್ಪ ಹಾಗೂ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ತುರ್ತಾಗಿ ಸ್ಪಂದಿಸಬೇಕು’ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್‌ ಹೇಳಿದರು.

ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಆಯೋಜಿಸಿದ್ದ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜಿಲ್ಲಾ ವಾಣಿಜ್ಯೋದ್ಯಮ ಸಂಘ 19 ವರ್ಷಗಳಿಂದ ಉದ್ಯಮಿಗಳಿಗೆ ಪ್ರಶಸ್ತಿ ನೀಡಿ, ಅವರನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಮಾದರಿಯಾಗಿದೆ. ಎಫ್‍ಕೆಸಿಸಿಐ ಉದ್ಯಮದಾರರಿಗೆ ಸಲಹೆ ನೀಡಲಿದೆ’ ಎಂದರು.‌

ADVERTISEMENT

ಸಾನ್ನಿಧ್ಯ ವಹಿಸಿದ್ದ ಮುಂಡರಗಿ ಶ್ರೀಗಳು ಮಾತನಾಡಿ, ‘ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ವ್ಯಾಪಾರವನ್ನು ಪ್ರಾಮಾಣಿಕತೆ ಹಾಗೂ ಪರಿಶುದ್ಧ ಮನಸ್ಸಿನಿಂದ ಮಾಡಿದಾಗ ಮಾತ್ರ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಆನಂದ ಎಲ್.ಪೋತ್ನಿಸ್‌ ಮಾತನಾಡಿ, ‘ಪ್ರಶಸ್ತಿಗಳು ಉದ್ಯಮ ಸ್ಥಾಪನೆ ಹಾಗೂ ವ್ಯವಹಾರದಲ್ಲಿ ಮತ್ತಷ್ಟು ಪ್ರಾಮಾಣಿಕತೆ ಹಾಗೂ ಕೈಗಾರಿಕೆ ಆರಂಭಕ್ಕೆ ಉತ್ತೇಜನ ನೀಡಲು ನೆರವಾಗುತ್ತವೆ. ಗದಗ ಚೇಂಬರ್ ಆಫ್‌ ಕಾಮರ್ಸ್‌ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ’ ಎಂದರು.

ಗದಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ವೇದಿಕೆಯಲ್ಲಿ ಇದ್ದರು.

ಗದುಗಿನ ಶೇಖಣ್ಣ ಫ. ಗದ್ದಿಕೇರಿ ಹಾಗೂ ದತ್ತುದಾಸ ಪುಣೇಕರ ಅವರಿಗೆ ಜೀವಮಾನ ಸಾಧನೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸದಾಶಿವಯ್ಯ ಮದರಿಮಠ ಅವರಿಗೆ ಚೇಂಬರ್ ಆಫ್‌ ಕಾಮರ್ಸ್‌ನಿಂದ ವಿಶೇಷ ಸನ್ಮಾನ ನಡೆಯಿತು.

ಶರಣಬಸಪ್ಪ ಕುರಡಗಿ ಸ್ವಾಗತಿಸಿದರು. ಚಂದ್ರು ಬಾಳಿ ಹಳ್ಳಿಮಠ ಮತ್ತು ಆರ್.ಬಿ. ದಾನಪ್ಪಗೌಡ್ರ ಅವರು ಪ್ರಶಸ್ತಿ ಪುರಸ್ಕೃತರನ್ನು, ಅಶೋಕ ನಿಲೂಗಲ್ ಅವರು ಅತಿಥಿಗಳನ್ನು ಪರಿಚಯಿಸಿದರು. ವೀರೇಶ ಕೂಗು ನಿರೂಪಿಸಿದರು. ಶರಣಬಸಪ್ಪ ಗುಡಿಮನಿ ವಂದಿಸಿದರು.

ಕಾರ್ಯಕ್ರಮದಲ್ಲಿ ಆರ್.ಬಿ. ದಾನಪ್ಪಗೌಡ್ರ, ಈಶಣ್ಣ ಮುನವಳ್ಳಿ, ಮಧುಸೂದನ ಪುಣೇಕರ, ಸೋಮನಾಥ ಕೆ. ಜಾಲಿ, ಚೇಂಬರ್ ಆಫ್‌ ಕಾಮರ್ಸ್‌ನ ಮಾಜಿ ಅಧ್ಯಕ್ಷ ಎಚ್.ವಿ.ಶಾನುಭೋಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.