ADVERTISEMENT

ಚಿಂಚಲಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ; ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಭೀತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 7:20 IST
Last Updated 7 ಜನವರಿ 2026, 7:20 IST
ಚಿಂಚಲಿ ಗ್ರಾಮದ ತೇರಿನಗಡ್ಡಿ ಹತ್ತಿರ ಇರುವ ಅಂಗನವಾಡಿ ಕಟ್ಟಡ ಶಿಥಿಲವಾಗಿರುವುದು
ಚಿಂಚಲಿ ಗ್ರಾಮದ ತೇರಿನಗಡ್ಡಿ ಹತ್ತಿರ ಇರುವ ಅಂಗನವಾಡಿ ಕಟ್ಟಡ ಶಿಥಿಲವಾಗಿರುವುದು   

ಮುಳಗುಂದ: ಇಲ್ಲಿಗೆ ಸಮೀಪದ ಚಿಂಚಲಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಾರ್ವಜನಿಕರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಮುಂದುವರಿದಿದೆ.

ಗ್ರಾಮದ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿವೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೆ ಅಲ್ಲೇ ನಿಂತು ದುರ್ನಾತ ಬೀರುತ್ತಿದೆ. ಇನ್ನೂ ಕೆಲವೆಡೆ ಸಿಸಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಗ್ರಾಮ ಪಂಚಾಯಿತಿ ಹತ್ತಿರದ ಚರಂಡಿಯಲ್ಲಿ ಹುಲ್ಲು ಬೆಳೆದು ಸುಮಾರು ತಿಂಗಳುಗಳೇ ಕಳೆದಿವೆ. ಆದರೂ ಸಹ ಸ್ವಚ್ಛತೆಗೆ ಕ್ರಮವಹಿಸಿಲ್ಲ.

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಜಾಲಿಗಿಡ, ಪಾರ್ಥೇನಿಯಂ ಕಸ ಬೆಳೆದು ನಿಂತಿದೆ. ಇತ್ತೀಚೆಗೆ ತೆರವು ಕಾರ್ಯ ಮಾಡಿದ್ದು ಪೂರ್ಣ ಕೆಲಸವಾಗಿಲ್ಲ. ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನಾವಗಿಲ್ಲ. ಗೇಟ್ ಬಳಿ ಗೋಡೆ ಕಾಮಗಾರಿ ಅಪೂರ್ಣವಾಗಿದೆ. ಅಂಗವಾನವಾಡಿ ಕಟ್ಟಡ ಶಿಥಿಲವಾಗಿ ಹಲವು ವರ್ಷಗಳಾಗಿದ್ದರೂ ದುರಸ್ತಿ ಕಾರ್ಯ ನಡೆದಿಲ್ಲ. ಇದರಿಂದ ಮೂಲಸೌಕರ್ಯ ಇಲ್ಲದ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ.

ADVERTISEMENT

ಗ್ರಾಮ ಪಂಚಾಯಿತಿ ಆವರಣದಲ್ಲಿ ಜಾಹೀರಾತು ಫಲಕ ಮುರಿದು ಬೀಳುವ ಹಂತದಲ್ಲಿದೆ. ಅಪಾಯದ ಸ್ಥಿತಿ ಇದ್ದರು ಸಹ ದುರಸ್ತಿ ಮಾಡದೆ ಹಾಗೆ ಬಿಡಲಾಗಿದೆ.

ಗ್ರಾಮದ ಸೌಂದರ್ಯ ಹೆಚ್ಚಿಸಿ ಸುಗಮ ಸಂಚಾರಕ್ಕಾಗಿ ವಿವಿಧಡೆ ಸಿಸಿ ರಸ್ತೆ, ಚರಂಡಿ ಮಾಡಿದ್ದಾರೆ. ಆದರೆ ತೇರಿನಗಡ್ಡಿ ಮನೆ ಹತ್ತಿರ ಕೊಳಚೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ನೀರು ಮುಂದೆ ಸಾಗಲು ಚರಂಡಿ ಸಹ ಇಲ್ಲ. ಇದರಿಂದ ನೀರು ನಿಂತು ಸೊಳ್ಳೆಗಳ ಉತ್ಪತ್ತಿತಾಣವಾಗಿದೆ. ಇದೇ ಸ್ಥಳದಲ್ಲಿ ವಾರದ ಸಂತೆ ನಡೆಯುತ್ತಿದೆ. ಸಂತೆ ತ್ಯಾಜ್ಯದಿಂದ ಚರಂಡಿಗಳು ತುಂಬಿಕೊಂಡಿವೆ. ಸ್ವಚ್ಛತೆ ಕೈಗೊಳ್ಳಬೇಕಿದ್ದ ಗ್ರಾಮ ಪಂಚಾಯಿತಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮದ ಬಸವರಾಜ ಆರೋಪಿಸಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ಮಳೆಗಾಲದಲ್ಲಿ ತಗ್ಗು ಗುಂಡಿ, ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ. ಸೊಳ್ಳೆ ನಾಶಕ ಸಿಂಪಡನೆ, ಸ್ವಚ್ಛತೆ ಕೈಗೊಳ್ಳುತ್ತಿಲ್ಲ. ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲ ಕಳೆಯುವ ಸ್ಥಿತಿ ಎದುರಿಸುವಂತಾಗಿದೆ. ಕೊಡಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಂಚಲಿ ಗ್ರಾಮದಲ್ಲಿನ ಸ್ವಚ್ಛತೆ ಚರಂಡಿ ಹೂಳು ತೆಗೆಸುವ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ. ಗ್ರಾಮದ ನೈರ್ಮಲ್ಯ ಕಾಪಾಡುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು.
ಮಲ್ಲಯ್ಯ ಕೊರಣ್ಣವರ ಗದಗ ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.