ಗದಗ: ಲಾಕ್ಡೌನ್ ಮುಂದುವರಿಸಿರುವ ಕೇಂದ್ರ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಅತ್ಯಂತ ಆಘಾತಕಾರಿ. ಇದು ಖಂಡನೀಯ’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.
‘ಮದ್ಯಪಾನದಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ. ಮದ್ಯವ್ಯಸನಿಗಳು ಮಾನಸಿಕ ಸ್ಥಿಮಿತ ಕಳೆದುಕೊಂಡಿರುತ್ತಾರೆ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಎಲ್ಲಿ ಬೇಕಾದಲ್ಲಿ ಬಿದ್ದು, ಹೊರಳಾಡಿ ಬಂದು ಮನೆಮಂದಿಗೆಲ್ಲ ಕೊರೊನಾ ಹಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸುವರು. ಮದ್ಯವ್ಯಸನಿಗಳಿಂದಾಗಿ ಮೊದಲು ಬೀದಿ ಪಾಲಾಗುತ್ತಿದ್ದ ಕುಟುಂಬಗಳು ಇನ್ನು ಮಸಣದ ಪಾಲಾಗುವ ದಿನಗಳು ದೂರವಿಲ್ಲ ಎನಿಸುತ್ತದೆ’ ಎಂದು ಸ್ವಾಮೀಜಿ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.
‘ಕೊರೊನಾದಿಂದ ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ.ಇದ್ದುದರಲ್ಲಿಯೇ ಸಂಸಾರ ನಿರ್ವಹಣೆ ಮಾಡಬೇಕಾದ ಸಂಕಷ್ಟ ಸ್ಥಿತಿ ಮನೆಯ ಹೆಣ್ಣು ಮಕ್ಕಳಿಗಿರುವಾಗ, ಹೊಡೆದು ಬಡಿದು ಇದ್ದುದನ್ನೂ ಕಸಿದುಕೊಂಡು ಹೋದರೆ ಅವರ ಪರಿಸ್ಥಿತಿ ಏನು ಎನ್ನುವುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಗಾಂಧೀಜಿಯವರ ನಾಡಿನವರೇ ಆದ ಪ್ರಧಾನಿ ಹಾಗೂ ಗೃಹಮಂತ್ರಿ ಅವರಿಂದ ಇಂತಹ ಕ್ರಮವನ್ನು ಭಾರತದ ಸುಸಂಸ್ಕೃತ ಸಮಾಜ ನಿರೀಕ್ಷಿಸಿರಲಿಲ್ಲ. ಅವರ ಈ ನಡೆ ದೇಶದ ಬಗ್ಗೆ ಅವರಿಗಿರುವ ಕಾಳಜಿಯನ್ನು ಪ್ರಶ್ನಿಸುವಂತಿದೆ’ ಎಂದೂ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಕೇಂದ್ರದ ಈ ನಡೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಚಲಿತರಾಗಿರಬಹುದು. ಕೊರೊನಾ ತಡೆಗಟ್ಟಲು ಮದ್ಯ ಮಾರಾಟವನ್ನು ಅವರು ಸಂಪೂರ್ಣವಾಗಿ ನಿಷೇಧಿಸಲೇಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.